ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ ನೀಡುವ 2021-22ನೇ ಸಾಲಿನ ಅತ್ಯುತ್ತಮ ಯುವ ಸಂಘ ಪ್ರಶಸ್ತಿಗೆ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ನೆಲದನಿ ಬಳಗ ಆಯ್ಕೆಯಾಗಿದ್ದು, ಫೆ.29ರಂದು ಮಂಡ್ಯನಗರ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಯು ₹ 25ಸಾವಿರ ನಗದು ಹೊಂದಿದೆ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದೆ ಸುಮಲತಾ, ಶಾಸಕ ಗಣಿಗ ರವಿಕುಮಾರ್ ಪಾಲ್ಗೊಳ್ಳುವರು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಕೆ.ರಾಜೇಶ್ ತಿಳಿಸಿದ್ದಾರೆ.
ನೆಲದನಿ ಬಳಗವು ದಶಕದಿಂದಲೂ ಜಿಲ್ಲೆಯಾದ್ಯಂತ ಸಮಾಜಮುಖಿ ಸೇವೆ ಮಾಡುತ್ತಾ ಬಂದಿದೆ. ರಕ್ತದಾನ ಶಿಬಿರ, ಕಲೆ, ಸಾಹಿತ್ಯ, ರಂಗ ಚಟುವಟಿಕೆ, ಗ್ರಾಮೀಣ ಕ್ರೀಡಾಕೂಟರಾಜ್ಯಮಟ್ಟದಲ್ಲಿ ಮನ್ನಣೆ ಪಡೆದಿದೆ, ನಾಟಿ ಕೋಳಿ- ರಾಗಿಮುದ್ದೆ ಉಣ್ಣುವ ಸ್ಪರ್ಧೆಗಮನ ಸೆಳೆದಿದೆ. ಸತಿ-ಪತಿ, ಕುಟುಂಬ ಸಮೇತ ರಕ್ತದಾನ ಮಾಡುತ್ತಾ ರಕ್ತದಾನಕ್ಕೆ ಬಳಗದ ಸದಸ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಸಸಿಗಳ ವಿತರಣೆ ಸೇರಿದಂತೆ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
‘ನಮ್ಮ ದಶಕದಕಾರ್ಯ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ಉಂಟಾಗಿದೆ. ಮುಂದೆ ಹೆಚ್ಚಿನ ಕೆಲಸ ಮಾಡಲು ಸ್ಫೂರ್ತಿಯಾಗಿದೆ’ ಎಂದು ಅಧ್ಯಕ್ಷ ಎಂ.ಸಿ.ಲಂಕೇಶ್ ತಿಳಿಸಿದ್ದಾರೆ.