ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಮತ್ತು ಬರುವ ಔಷಧಿ ನೀಡಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳಕಿಗೆ ಬಂದಿದೆ. ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಕೂಡೂರಿನ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರಿ ಅಧಿಕಾರಿಗಳು ಮತ್ತು ಬರುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್, ಶೂಶ್ರುಷಕಿ ಚಂದನ ಮತ್ತು ಆಕೆಯ ಪ್ರಿಯಕರ ವಿನಯ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸುರೇಶ್ ವಿದ್ಯಾರ್ಥಿನಿಯರಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಕೊಡಿಸುತ್ತೇನೆಂದು ವಿದ್ಯಾರ್ಥಿಯರು ಮತ್ತು ಅವರ ಪೋಷಕರನ್ನು ನಂಬಿಸುತ್ತಿದ್ದ. ಬಳಿಕ, ಕೋರ್ಸ್ ಸೇರಲು ಒಪ್ಪುವ ವಿದ್ಯಾರ್ಥಿನಿಯರನ್ನು ಚಂದನಾ ಬಳಿ ಕಳಿಸುತ್ತಿದ್ದ. ಅಲ್ಲಿ, ಆಕೆಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿರುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಕಡೂರು ತಾಲ್ಲೂಕಿನ ಅಂಚೆಚೋಮನಹಳ್ಳಿ ಗ್ರಾಮದಲ್ಲಿರುವ ವಸತಿ ಶಾಲೆಯ ಡಿ ಗ್ರೂಪ್ ನೌಕರ ಸುರೇಶ್, ಅದೇ ಗ್ರಾಮದ ಆರೋಗ್ಯ ಮತ್ತು ಕ್ಷೇತ್ರ ಕೇಂದ್ರದ ಎಎನ್ಎಂ ಚಂದನಾ ಹಾಗೂ ಆಕೆಯ ಪ್ರಿಯಕರ ವಿನಯ್ ಬಂಧಿತ ಆರೋಪಿಗಳಾಗಿದ್ದಾರೆ.
ವಿದ್ಯಾರ್ಥಿನಿಯರಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಪರೀಕ್ಷೆ ಬರೆಯಲು ಅವಕಾಶ ಕೊಡಿಸುತ್ತೇ ನೆ.ಪರೀಕ್ಷೆಯಲ್ಲಿ ಪಾಸಾದಲ್ಲಿ ಕೆಲಸ ಸಿಗುತ್ತದೆ ಎಂದು ಸುರೇಶ್ ನಂಬಿಸಿದ್ದ. ಪೋಷಕರೂ ಈತನ ಮಾತನ್ನು ನಂಬಿದ್ದರು. ಅಂಚೆಚೋಮನಹಳ್ಳಿ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಚಂದನಾ ಬಳಿ ಬಿಡುತ್ತಿದ್ದ. ಚಂದನಾ ಆರೋಗ್ಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ರಾತ್ರಿ ವೇಳೆ ಅಲ್ಲೇ ಉಳಿಸಿಕೊಂಡು ಕಾಫಿ, ಟೀನಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿರುವ ಹೆಣ್ಣುಮಕ್ಕಳ ಮೇಲೆ ಚಂದನಾ ಪ್ರಿಯಕರ ವಿನಯ್ಕುಮಾರ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬುದು ಬಯಲಾಗಿದೆ.
ಆರೋಗ್ಯ ಕೇಂದ್ರಕ್ಕೆ ಹೆಣ್ಣುಮಕ್ಕಳು ಬಂದು ಹೋಗುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಸ್ಥರಿಗೆ ಅನುಮಾನ ಬಂದಿರುವುದು ಗೊತ್ತಾಗುತ್ತಿದ್ದಂತೆ ಚಂದನಾ ಮತ್ತು ಡಿ ದರ್ಜೆ ನೌಕರ ಸುರೇಶ್ ನಾಪತ್ತೆಯಾಗಿದ್ದರು. ಬುಧವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಜ್ಞೆ ತಪ್ಪಿದ ಬಳಿಕ ವಿನಯ್ಕುಮಾರ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಎರಡು ಮೂರು ತಿಂಗಳಿಂದ ಈ ಕೃತ್ಯ ನಡೆಯುತ್ತಿದ್ದರೂ ವಿದ್ಯಾರ್ಥಿಯರು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಭಯಗೊಂಡು ಸುಮ್ಮನಿದ್ದರು. ಆರೋಪಿ ಚಂದನಾ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮದವಳಾಗಿದ್ದು, ಆಕೆಯ ಪ್ರಿಯಕರ ವಿನಯ್ ಕುಮಾರ್ ಸೊರಬ ತಾಲ್ಲೂಕಿನ ಆಲವಟ್ಟಿಯಲ್ಲಿ ಫ್ಯಾನ್ಸಿಸ್ಟೋರ್ ಮಾಲಿಕನಾಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತರೀಕೆರೆ ವಿಭಾಗದ ಡಿವೈಎಸ್ಪಿ ಹಾಲಮೂರ್ತಿ ಪ್ರತಿಕ್ರಿಯಿಸಿ, “ವಸತಿ ಶಾಲೆಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕೃತ್ಯ ತನಿಖೆಯಿಂದ ಬಹಿರಂಗವಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದ್ದು, ವಸತಿ ಶಾಲೆಯಲ್ಲಿನ ಕೆಲ ವಿದ್ಯಾರ್ಥಿನಿಯರ ಹೇಳಿಕೆ ಪಡೆಯಲಾಗಿದೆ. ಸಂತ್ರಸ್ತರು ಈ ಸಂಬಂಧ ಹೆಚ್ಚಿನ ಮಾಹಿತಿ, ದೂರು ನೀಡಿದ್ದಲ್ಲಿ ತನಿಖೆಗೆ ಸಹಕಾರ ಆಗಲಿದೆ” ಎಂದಿದ್ದಾರೆ.