ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದ ಆರ್ಎಂಎಸ್ಎ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದು ವಿದ್ಯಾರ್ಥಿನಿಯರಿಂದ ಹಾಗೂ ಗ್ರಾಮಸ್ಥರಿಂದ ಗೂಸ ತಿಂದ ಮುಖ್ಯ ಶಿಕ್ಷಕರ ಚಿನ್ಮಯಾನಂದ ಮೂರ್ತಿಯನ್ನು ರಕ್ಷಿಸಲು ಸ್ವತಃ ಸಾರ್ವಜನಿಕರು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪ್ರಯತ್ನ ನಡೆಸುತ್ತಿದ್ದಾರೆಂಬ ಆರೋಪ ಈಗ ಕೇಳಿ ಬಂದಿದೆ.
ಸಾರ್ವಜನಿಕರ ಶಿಕ್ಷಣ ಇಲಾಖೆಯ ಡೆಪ್ಯೂಟಿ ಪ್ರಾಜೆಕ್ಟ್ ಕೋ-ಆರ್ಡಿಸೆಟರ್ ಆಗಿರುವ ಲಕ್ಷ್ಮಿ ಅವರು ಆರ್ ಎಂ ಎಸ್ ಎ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಬಲವಂತವಾಗಿ ಹೇಳಿಕೆ ಪಡೆದು ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆಂದು ಸ್ಥಳೀಯ ಕಟ್ಟೇರಿ ಗ್ರಾಮದ ಮುಖಂಡ ಕೆ.ಜೆ.ಶ್ರೀಕಂಠೇಗೌಡ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.
ಕಳೆದ ಡಿ.14ರಂದು ಆರ್ಎಂಎಸ್ಎ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲೆ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದು, ರಾಜ್ಯದಾದ್ಯಂತ ಭಾರಿ ಪ್ರತಿರೋಧಕ್ಕೆ ಕಾರಣವಾಗಿತ್ತು. ಈ ಪ್ರಕರಣವು ಈಗ ನ್ಯಾಯಾಲಯದ ಮೇಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಈ ಹಂತದಲ್ಲಿರುವಾಗ ಡಿ.19ರಂದು ನಿಲಯದ ಪಾಲಕರು ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳಲಿರುವ ವೇಳೆಯಲ್ಲಿ ಶಿಕ್ಷಣ ಇಲಾಖೆಯ ಡೆಪ್ಯೂಟಿ ಪ್ರಾಜೆಕ್ಟ್ ಕೋ ಆರ್ಡಿನೆಟರ್ ಲಕ್ಷ್ಮಿ ಅವರು ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವ ವಿದ್ಯಾರ್ಥಿನಿಲಯದ ಮೊದಲನೇ ಮಹಡಿಗೆ ಬಲವಂತವಾಗಿ ಮಕ್ಕಳನ್ನು ಕರೆದೊಯ್ದು, ಹೆಣ್ಣು ಮಕ್ಕಳನ್ನು ಬೆದರಿಸಿ ಕಾಮುಕ ಮುಖ್ಯ ಶಿಕ್ಷಕನ ಪರವಾಗಿ ಹೇಳಿಕೆಯನ್ನು ಪಡೆದಿದ್ದಾರೆಂದು ಕೆ.ಜೆ.ಶ್ರೀಕಂಠೇಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿ ಲಕ್ಷ್ಮಿ ಅವರು ನೀಡುವ ಯಾವುದೇ ವರದಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾನ್ಯ ಮಾಡಬಾರದು, ಅವರು ಸಾಕ್ಷಿಗಳು ಮತ್ತು ಆಧಾರಗಳನ್ನು ನಾಶಪಡಿಸಲು ಯತ್ನಿಸುತ್ತಿರುವುದರಿಂದ ನ್ಯಾಯದಾನಕ್ಕೆ ಲೋಪ ವೆಸಗುತ್ತಿದ್ದು, ಅವರ ಮೇಲೆ ನಿಗಾ ಇಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೆ.ಜೆ.ಶ್ರೀಕಂಠೇಗೌಡ ಒತ್ತಾಯಿಸಿದ್ದಾರೆ.