ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡದೇ ಇಷ್ಟಪಟ್ಟು ಅಭ್ಯಾಸ ಮಾಡಿ ಸಾಧನೆ ಮಾಡಬೇಕು . ಯುವಜನರು ಹಾಗೂ ವಿದ್ಯಾರ್ಥಿಗಳು ತಂದೆ ತಾಯಿಗಳ ಒತ್ತಡಕ್ಕೆ ಒಳಗಾಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡದೇ ಇಷ್ಟಪಟ್ಟು ಅಭ್ಯಾಸ ಮಾಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಸನಗೊಳಿಸಿಕೊಳ್ಳಬೇಕು ಎಂದು ರಾಜ್ಯ ವ್ಯಕ್ತಿತ್ವ ವಿಕಸನ ತರಬೇತುದಾರ ಶಂಕರ್ ಬೆಳ್ಳೂರು ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಸಮಾಜಸೇವಕ ಮಲ್ಲಿಕಾರ್ಜುನ ಅವರು ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಜೀವನದ ಗುರಿಸಾಧನೆ ಕುರಿತು ರೂಪಿಸಿರುವ ಕೆರಿಯರ್ ಲಾಂಚರ್ ಕಾರ್ಯಕ್ರಮದ ಅಂಗವಾಗಿ ನಡೆದ ವಿದ್ಯಾರ್ಥಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿ ಮಾತನಾಡಿದರು.
ದ್ವಿತೀಯ ಪಿಯುಸಿ, ಅಥವಾ ಎಸ್ಎಸ್ಎಲ್ಸಿ ಪರೀಕ್ಷೆಯ ನಂತರ ಮುಂದೇನು ವ್ಯಾಸಂಗ ಮಾಡಬೇಕು ಯಾವ ಕೋರ್ಸಿಗೆ ಸೇರಬೇಕು ಎಂಬ ಗೊಂದಲದಲ್ಲಿರುವ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ದೊರೆಯುವುದಿಲ್ಲ. ಯಾರದೇ ಬಲವಂತ ಹಾಗೂ ಒತ್ತಾಯಕ್ಕೆ ಶಿಕ್ಷಣ ಪಡೆಯದೇ ನಮ್ಮ ಬದುಕು ರೂಪಿಸಿ ಕೊಳ್ಳಲು ಶಿಕ್ಷಣವು ಬೇಕೇ ಬೇಕು. ಆದ್ದರಿಂದ ವಿದ್ಯಾರ್ಥಿ ಗಳು ಲೋಕಜ್ಞಾನವನ್ನು ಅರಿಯಲು ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜಸೇವಕ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸಾಧಕರ ಸಂಖ್ಯೆಯು ಹೆಚ್ಚಿದ್ದರೂ ಅವರು ಸಾಧನೆ ಮಾಡಲು ಬೇಕಾದ ದಾರಿಯಾವುದು, ಯಾವ ದಾರಿಯಲ್ಲಿ ಸಾಗಬೇಕು ಎಂಬ ಸಾಮಾನ್ಯ ಅರಿವು
ಇರುವುದಿಲ್ಲವಾದ್ದರಿಂದ ವೃತ್ತಿಕೌಶಲ್ಯ ತರಬೇತಿ ಮಾರ್ಗದರ್ಶಕರನ್ನು ಕರೆಸಿ ಅವರೊಂದಿಗೆ ನಮ್ಮ ವಿದ್ಯಾರ್ಥಿಗಳ ಜೊತೆ ಸಂವಾದ ಆಯೋಜಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸಲು ಕಾರ್ಯಕ್ರಮ ಆಯೋಜಿಸಿದ್ದೇನೆ ಎಂದರು.
ಗಾಂಧಿ ಜಯಂತಿ ಆಚರಣೆ
ಇದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಹಾಗೂ ಮಾಜಿಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಗಣ್ಯರು ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪೂಜೆ ಮಾಡಿ, ಪುಷ್ಪನಮನ ಸಲ್ಲಿಸಿ, ಭಕ್ತಿನಮನ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿ ಗಳಾದ ರಾಘವೇಂದ್ರ, ಬಳ್ಳೇಕೆರೆ ಮಂಜುನಾಥ್, ಪಿರಿಯಾಪಟ್ಟಣ ಸುರೇಶ್, ಮೈಸೂರಿನ ರಾಜ್ಗೋಪಾಲ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ತಾಲೂಕು ಪ್ರಾಥಮಿಕ ಶಾಲಾ ಶೀಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ.ಅಂ.ಚಿ. ಸಣ್ಣಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.