ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವುದು ನೋವಿನ ವಿಚಾರ, ನಮ್ಮ ಮನೆಯಲ್ಲಿ ನೀರಿಲ್ಲ, ಅನ್ನ ಇಲ್ಲ ಇಂತಹ ಸನ್ನಿವೇಶದಲ್ಲಿ ನೀರು ಕೊಡುವುದು ಹೇಗೆ ? ಮಳೆ ಬೆಳೆ ಇಲ್ಲದೆ ಬರಗಾಲ ಪರಿಸ್ಥಿತಿ ಎದುರಾಗಿದೆ, ಮನುಷ್ಯ ಕೇಳಿ ಪಡೆಯುತ್ತಾನೆ, ಆದರೆ ಜಾನುವಾರು, ಪ್ರಾಣಿ ಪಕ್ಷಿಗಳು ಕೇಳಿ ತಿನ್ನುತ್ತವಾ, ಜಲಾಶಯಗಳು ಬರಿ ದಾಗುತ್ತಿರುವುದರಿಂದ ಕುಡಿಯುವ ನೀರಿಗೂ ಅಭಾವದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ಶಿವಬಸವಸ್ವಾಮಿಜೀ ಆತಂಕ ವ್ಯಕ್ತಪಡಿಸಿದರು.
ಮಂಡ್ಯ ನಗರದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೂ ಸಹ ರಾಜ್ಯ ಸರ್ಕಾರ ಮೌನವಾಗಿರುವುದು ದುರದೃಷ್ಟಕರ. ಪ್ರಜೆಗಳಿಗೋಸ್ಕರ ಸರ್ಕಾರಗಳು ಇರುತ್ತವೆ, ಆದರೆ ನಮ್ಮನ್ನಾಳುತ್ತಿರುವ ಸರ್ಕಾರ ನಿರಂತರ ಅನ್ಯಾಯವಾಗುತ್ತಿದ್ದರೂ ಮೌನ ತಾಳಿರುವುದು ಸರಿಯಲ್ಲ ಎಂದರು.
ಕಾವೇರಿ ವಿಚಾರದಲ್ಲಿ ಹೊರಡಿಸಿರುವ ತೀರ್ಪುಗಳು ಅವೈಜ್ಞಾನಿಕ, ಆದರೂ ಸಹ ಅದನ್ನು ಪಾಲನೆ ಮಾಡುತ್ತಿರುವುದು ಸರಿಯಲ್ಲ, ಪಾದಯಾತ್ರೆ ಮೂಲಕ ತೆರಳಿ ಮಲೆ ಮಹದೇಶ್ವರನ ದರ್ಶನ ಮಾಡಿದ್ದೇನೆ, ಅಲ್ಲಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ತಿಳುವಳಿಕೆ ಕೊಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.