ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ 5 ರಿಂದ 6 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಕೊಟ್ಟು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಮೈಷುಗರ್ ಕಾರ್ಖಾನೆಯನ್ನು ಆಧುನೀಕರಣ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಮಂಡ್ಯನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ‘ಪ್ರಜಾಧ್ವನಿ’ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮೈಷುಗರ್ ಆಧುನೀಕರಣಕ್ಕೆ ಅದು ಎಷ್ಟೆ ಕೋಟಿಗಳು ಖರ್ಚಾದರೂ ಚಿಂತೆ ಇಲ್ಲ, ಈ ಭಾಗದ ರೈತರ ಹಿತವೇ ಮುಖ್ಯ ನನಗೆ. ಮೈಸೂರು ಮಹಾರಾಜರು ರೈತರ ಮೇಲಿನ ಅಪಾರವಾದ ಕಾಳಜಿಯಿಂದ ಈ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದಾರೆ, ಅದನ್ನು ಎಂದಿಗೂ ಖಾಸಗಿಯವರಿಗೆ ಮಾರಾಟ ಮಾಡುವುದಿಲ್ಲ. ಸರ್ಕಾರಿ ಸ್ವಾಮ್ಯದಲ್ಲದೆ ಉಳಿಸಿಕೊಳ್ಳುತ್ತೇವೆ. ಈ ಭಾಗದಲ್ಲಿ ಒಂದು ವರ್ಷಕ್ಕೆ ಮೂರುವರೆ ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ, ಆ ಎಲ್ಲಾ ಕಬ್ಬನ್ನು ಅರೆದು ರೈತರಿಗೆ ಲಾಭ ತಂದು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಮೈಷುಗರ್ ಕಾರ್ಖಾನೆಯಲ್ಲಿ ಕೋ-ಜನರೇಷನ್, ಲಿಕ್ಕರ್, ಎಥೆನಾಲ್ ತಯಾರು ಮಾಡಿದರೆ ಯಾವುದೇ ಕಾರಣಕ್ಕೂ ನಷ್ಟವಾಗುವುದಿಲ್ಲ, ಆದರೆ ಈಗಿನ ಸರ್ಕಾರ ಕಾರ್ಖಾನೆಗೆ ₹ 50 ಕೋಟಿ ಕೊಡುವುದಾಗಿ ಹೇಳಿ, ಕೇವಲ 30 ಕೋಟಿ ರೂ.ಗಳನ್ನು ಮಾತ್ರ ನೀಡಿದೆ, ಇದರಿಂದ ಕಾರ್ಖಾನೆಯೂ ಕುಂಟುತ್ತ ನಡೆಯುತ್ತಿದೆ. ಈಗಿನ ಮುಖ್ಯಮಂತ್ರಿಗೆ ರೈತ ಹಿತ ಬೇಕಾಗಿಲ್ಲ, ರೈತರು ಕಬ್ಬಿನ ಬೆಂಬಲ ಬೆಲೆಗಾಗಿ ನೂರಾರು ದಿನಗಳಿಂದ ಹೋರಾಟ ನಡೆಸುತ್ತ ಬೀದಿಯಲ್ಲಿದ್ದರೂ ಅವರ ಕಷ್ಟ ಕೇಳುವ ಕೆಲಸ ಮಾಡಿಲ್ಲ, ಅದ್ದರಿಂದ ಇಂತಹ ಹೃದಯಹೀನ, ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ನಾಯಕರಾದ ರೆಹಮಾನ್ ಖಾನ್, ಮಾಜಿ ಸಚಿರಾದ ಎಂ.ಎಸ್.ಆತ್ಮಾನಂದ, ಎನ್.ಚಲುವರಾಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.