ಇದೇ ಜುಲೈ 7 ರಂದು ಬೆಳಗ್ಗೆ 10.30 ಕ್ಕೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಹಾಗೂ ಡಾ.ವಿ ಟಿ ಸುಶೀಲ ಜಯರಾಮ್ ಟ್ರಸ್ಟ್ ವತಿಯಿಂದ ಶತಾಯುಷಿ ಸಾಹಿತಿ ದಿ.ಸೀತಾಸುತ ಮತ್ತು ವಿಟಿ ಸುಶೀಲ ಜಯರಾಂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಟ್ರಸ್ಟ್ ಕಾರ್ಯದರ್ಶಿ ಡಾ.ಜಯರಾಂ ತಿಳಿಸಿದರು.
ಮಂಡ್ಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1999ರಿಂದ ನಾವು ಸೀತಾಸುತ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, ನಂತರ ಡಾ.ವಿ.ಟಿ.ಸುಶೀಲ ಅವರ ಹೆಸರಿನಲ್ಲಿಯೂ ಪ್ರಶಸ್ತಿ ಸ್ಥಾಪಿಸಲಾಯಿತು ಎಂದರು.
ದೇಶ ಸೇವೆಗಾಗಿ ವೀರಯೋಧ ಜನಾರ್ಧನ್ ಅವರಿಗೆ ಮರಣೋತ್ತರ ಪ್ರಶಸ್ತಿ ಹಾಗೂ ಸಾಹಿತ್ಯ ಸೇವೆಗಾಗಿ ಹಾಸನದ ಹೇಮ ಗಂಗೋತ್ರಿ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಪುಟ್ಟಸ್ವಾಮಿ ಹಾಗೂ ವಿಟಿ ಸುಶೀಲ ಜಯರಾಂ ವೈದ್ಯಕೀಯ ಪ್ರಶಸ್ತಿಗೆ ನೆಲಮಂಗಲ ಮೆಡಿಕಲ್ ಹಾಸ್ಪಿಟಲ್ ನ ಆಡಳಿತ ಅಧಿಕಾರಿ ಡಾ.ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದ್ದು ಅಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು. ಜೊತೆಗೆ ಮೂರು ಮಂದಿ ಯೋಧರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು .
ಅಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎನ್ ಕೆ ಲೋಕನಾಥ್ ವಹಿಸಲಿದ್ದು, ಸೀತಾಸುತ ಅವರನ್ನು ಕುರಿತು ಟ್ರಸ್ಟಿನ ಅಧ್ಯಕ್ಷ ಕೆ ಎಸ್ ದೊರೆ ಸ್ವಾಮಿ ಮಾತನಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ದೊರೆಸ್ವಾಮಿ ಹಾಗೂ ಶ್ರೀಕಂಠಸ್ವಾಮಿ ಉಪಸ್ಥಿತರಿದ್ದರು.