ಸಾಮಾಜಿಕ ನಾಟಕಗಳು ನೈಜ ಜೀವನದ ಪ್ರತಿಬಿಂಬವಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಹೇಳಿದರು.
ಮಂಡ್ಯ ನಗರದ ಕಲಾ ಮಂದಿರದಲ್ಲಿ ಶ್ರೀ ರೇವಣ ಸಿದ್ದೇಶ್ವರ ಕಲಾ ಸಂಘ ಗುರು ಮಠ ಮತ್ತು ಸ್ತ್ರೀ ಕಲಾ ಜ್ಯೋತಿ ನಾಟಕ ಮಂಡಳಿ ಹೊಸಹಳ್ಳಿ ಇವರು ಆಯೋಜಿಸಿದ್ದ ಐದು ದಿನಗಳ ಸಾಮಾಜಿಕ ಗ್ರಾಮೀಣ ನಾಟಕೋತ್ಸವಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ಕೆ ರವಿಕುಮಾರ್ ಚಾಮಲಾಪುರ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು.
ಪೌರಾಣಿಕ ನಾಟಕಗಳು ನೆಲದ ಐತಿಹ್ಯವನ್ನು ಪ್ರತಿಪಾದಿಸಿ, ಜನಜೀವನವನ್ನು ಸ್ವಾಸ್ಥ್ಯದೆಡೆಗೆ ಸಾಗಿಸಿದರೆ, ಸಾಮಾಜಿಕ ನಾಟಕಗಳು ನೈಜತೆಯನ್ನು ಕಟ್ಟಿಕೊಡುತ್ತವೆ. ಬದುಕನ್ನು ಬದಲಾಯಿಸುವ ಅಂಶಗಳು ಕಣ್ಣಿಗೆ ಕಟ್ಟಿಕೊಡುತ್ತವೆ ಎಂದರು.
ಕಲಾವಿದರ ಬದುಕು ಆರ್ಥಿಕವಾಗಿ ಕುಸಿದಿದೆ, ಸರ್ಕಾರ ಹೆಚ್ಚು ಅನುದಾನ, ಪಿಂಚಣಿ ನೀಡುವ ಮೂಲಕ ಅವರನ್ನು ಪೋಷಿಸಬೇಕಿದೆ. ನಗರಸಭೆಯು ನಾಟಕಗಳಿಗೆ ಇಂತಿಷ್ಟು ಗೌರವಧನ ನೀಡುವುದು ಸೂಕ್ತ, ಕಲೆ ಉಳಿವಿಗೆ ಪ್ರೋತ್ಸಹ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಮಾತನಾಡಿ, ಗ್ರಾಮೀಣ ಜನ ಜೀವನವನ್ನು ಕಥಾನಕವನ್ನಾಗಿಸಿಕೊಂಡು ಪಾತ್ರಗಳಿಗೆ ಜೀವತುಂಬುವುದು ಕಷ್ಟಕರವಾದ ಕಲೆಯಾಗಿದೆ. ರಂಗಭೂಮಿ ಕಲಾವಿದರನ್ನು ಪೋಷಿಸಿ ಗೌರವಿಸಿ, ಆರ್ಥಿಕವಾಗಿ ನೆರವು ನೀಡಿ ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ಸದಸ್ಯೆ ಪವಿತ್ರ ಬೋರೇಗೌಡ, ಬಿಜೆಪಿ ಮುಖಂಡ ನಾಗೇಶ್ ಹೊಸಹಳ್ಳಿ, ಹೊಸಳ್ಳಿ ಗ್ರಾಮದ ಮುಖಂಡರಾದ ಸುರೇಶ್, ಶಿವು ಹಾಗೂ ನಾಟಕ ನಿರ್ದೇಶಕ ರಾಜೇಂದ್ರ, ಮುಖಂಡ ಪ್ರಕಾಶ್ ಸಿಂಗ್ ಸೇರಿದಂತೆ ಹಲವರಿದ್ದರು