ಮಹಾರಾಷ್ಟದ ಅಚ್ಚ ಕನ್ನಡ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಸಾಂಗ್ಲಿ ಪಂಡರಾಪುರ
ಉಸ್ಮನಬಾದ್, ಎಲ್ಲೋರ ಅಜಂತಾ ಹಾಗೂ ಅರ್ಧ ಭಾಗ ಮುಂಬೈ ನಗರವನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳ ಬೇಕೆಂದು ಆಗ್ರಹಿಸಿ ಕದಂಬ ಸೈನ್ಯದ ಕಾರ್ಯಕರ್ತರು ಇಂದು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಪ್ರತಿಭಟನಕಾರರು, ಮುಖ್ಯಮಂತ್ರಿಗಳು ಗಟ್ಟಿಧ್ವನಿಯಲ್ಲಿ ಕನ್ನಡ ನಾಡು, ನುಡಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಕನ್ನಡಿಗರು ಕರ್ನಾಟಕಕ್ಕೆ ಸೇರಲು ಹೋರಾಟ ಮಾಡಲು ಪ್ರೇರಣೆ ನೀಡಬೇಕು. ಕನ್ನಡಿಗರು ತೀವ್ರತರವಾದ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಆಸಕ್ತಿವಹಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕದಂಬ ಸೈನ್ಯೆದ ಅಧ್ಯಕ್ಷ ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಬೆಂಜಮಿನ್ ಥಾಮಸ್, ಬಿ.ಶಿವಕುಮಾರ್, ರಾಮು, ಕೆ.ಸಿ.ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.