ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೈಪೋಟಿಗೆ ಬಿದ್ದಂತೆ ವರ್ತಿಸುತ್ತಿರುವ ಕೆಲವು ಟಿವಿ ಪತ್ರಕರ್ತರು ತಾವೇ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಾ ನಾವೆಷ್ಟು ಅಜ್ಞಾನಿಗಳು ಎಂಬುದನ್ನು ತಾವೇ ಬಯಲು ಮಾಡಿಕೊಳ್ಳುತ್ತಿ ದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಇಬ್ಬರು ಟಿವಿ ಪತ್ರಕರ್ತರು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ7 ಅನು ಮತ್ತು ಎ8 ಜಗದೀಶ್ ಎಂಬವರು ಪರಾರಿಯಾಗಿದ್ದಾರೆ. ಎ7 ಅನು ಎಂಬ ಯುವತಿ ಕೂಡ ರೇಣುಕಾ ಸ್ವಾಮಿ ಕೊಲೆಯಲ್ಲಿ ಶಾಮೀಲಾಗಿದ್ದಾಳೆ ಅನ್ನೋದು ಪೋಲಿಸರ ತನಿಖೆಯಿಂದ ಹೊರಗೆ ಬಂದಿದೆ ಎಂದು ಹೇಳಿದ್ದಲ್ಲದೆ, ಅನು ಎಂಬ ಯುವತಿಯನ್ನು ದರ್ಶನ್ ಮತ್ತು ಆತನ ಗ್ಯಾಂಗ್ ಮುಂದಿಟ್ಟುಕೊಂಡು ರೇಣುಕಾ ಸ್ವಾಮಿಯನ್ನು ಖೆಡ್ಡಾಗೆ ಕೆಡವಿ ಕೊಂಡಿತು ಎಂಬ ಕಪೋಲ ಕಲ್ಪಿತ ಸುದ್ದಿಯನ್ನು ಹೇಳಿದ್ದರು.
ಅಲ್ಲದೆ ಜಡೆ ಇರುವ ಹುಡುಗಿಯ ಚಿತ್ರವನ್ನು ಹಾಕಿ, ಅದರ ಕೆಳಗೆ ಎ7 ಅನು ಎಂದು ಬರೆದಿದ್ದರು. ಆದರೆ ಎರಡು ದಿನಗಳ ಹಿಂದಷ್ಟೇ ಚಿತ್ರದುರ್ಗದಲ್ಲಿ ಅನು ಪೋಲಿಸರ ಮುಂದೆ ಶರಣಾದಳು. ಈ ಖ್ಯಾತ? ಟಿವಿ ಪತ್ರಕರ್ತರ ಪ್ರಕಾರ ಈ ಅನು ಯುವತಿಯಲ್ಲ. ಅನು ಅಲಿಯಾಸ್ ಅನಿಲ್ ಕುಮಾರ್ ಎಂಬ ಯುವಕ. ಅಲ್ಲಿಗೆ ಅನು ಎಂದು ಬೊಂಬಡ ಹೊಡೀತಿದ್ದ ಈ ಟಿವಿ ಪತ್ರಕರ್ತರಿಬ್ಬರ ಜ್ಞಾನ ಜನರಿಗೆ ಗೊತ್ತಾಯಿತು. ಅನು ಎಂಬುವರು ಯುವಕನೋ ,ಯುವತಿಯೋ ಎಂಬುದು ಸರಿಯಾಗಿ ತಿಳಿಯುವವರೆಗೆ,ಪೋಲಿಸರು ತಿಳಿಸುವವರೆಗೆ ಕಾಯದೆ ಸುದ್ದಿ ಬಿತ್ತರಿಸಿ ನಾವೇ ಮೊದಲು,ನಮ್ಮಲ್ಲೇ ಫಸ್ಟ್ ಎಂದು ಹೇಳಿ ತಾವೆಷ್ಟು ಅಜ್ಞಾನಿಗಳು ಎಂಬುದನ್ನು ಸಾಬೀತು ಪಡಿಸಿದರು.
ಮತ್ತೊಬ್ಬ ಟಿವಿ ಪತ್ರಕರ್ತ ಹಿಂದೂಗಳಲ್ಲಿ ಒಂದು ಮಾತಿದೆ. ಬ್ರಹ್ಮ ಹತ್ಯೆ ಮಹಾ ಪಾಪ ಅಂತ. ಬ್ರಾಹ್ಮಣರನ್ನು ಕೊಂದರೆ ಮಹಾ ಪಾಪ ಎಂದು ಇದರ ಅರ್ಥ. ರೇಣುಕಾ ಸ್ವಾಮಿ ಲಿಂಗಾಯಿತರಲ್ಲಿ ಬ್ರಾಹ್ಮಣ ಇದ್ದಂಗೆ, ಆತನನ್ನು ಅಯ್ನೋರು ಅಂತಾರೆ. ಅವರು ಕಾಲು ತಾಗಿದ್ರೆ ಜನರೇ ಅವರಿಗೆ ಅಡ್ಡ ಬೀಳ್ತಾರೆ. ಅವರು ಲಿಂಗ ಪೂಜೆ ಮಾಡುವಾಗ ಕಷ್ಟ ಸುಖಗಳಲ್ಲಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂಬುದಾಗಿ ಹೇಳುತ್ತಾ, ಲಿಂಗಾಯಿತ ಎನ್ನುವುದು ಸ್ವತಂತ್ರ ಧರ್ಮ ಎನ್ನುವುದನ್ನೇ ಮರೆತಿದ್ದ. ಬಸವಣ್ಣನವರು 12ನೇ ಶತಮಾನದಲ್ಲಿ ಹಲವು ಶೂದ್ರರನ್ನು ಲಿಂಗಾಯಿತರನ್ನಾಗಿ ಮಾಡಿ ಸ್ವತಂತ್ರ ಧರ್ಮ ಸ್ಥಾಪನೆ ಮಾಡಿದ್ದಾರೆ ಎನ್ನುವ ಸಾಮಾನ್ಯ ಪ್ರಜ್ಞೆಯು ಈ ಪತ್ರಕರ್ತನಿಗೆ ಇಲ್ಲ.ಲಿಂಗಾಯತ ಧರ್ಮದಲ್ಲಿ ಇಲ್ಲದಿದ್ದ ಅಂಶಗಳನ್ನು ಹೇಳುವ ಮೂಲಕ ಇವರೆಲ್ಲ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.