ಕೃಷಿ ಚಟುವಟಿಕೆಗೆ ಪೂರಕವಾಗಿ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ನಾನಾ ಸಾಮಾಗ್ರಿಗಳನ್ನು ಮಾರಾಟಗಾರರು ರೈತರಿಗೆ ಪೂರೈಕೆ ಮಾಡುವಾಗ ಸರ್ಕಾರದ ನಿಯಮ ಪಾಲಿಸುವುದರ ಜೊತೆಗೆ ರೈತರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯ ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಗೆ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನುಮೋದಿತ ಬಿತ್ತನೆ ಬೀಜ ಮಾತ್ರ ಮಾರಾಟ ಮಾಡಬೇಕು, ಮಂಡ್ಯ ಜಿಲ್ಲೆಯಲ್ಲಿ ರೈತರು ಖಾಸಗಿ ಸಂಸ್ಥೆಗಳ ಭತ್ತದ ತಳಿಗಳನ್ನು ಬಿತ್ತನೆಗಾಗಿ ಬಳಸುವುದು ಪ್ರಚಲಿತವಾಗಿದೆ. ಮಂಡ್ಯ ಜಿಲ್ಲೆಗೆ ಶಿಫಾರಸ್ಸು ಮಾಡಿರುವ ಹಾಗೂ ಅನುಮೋದನೆಯಾಗಿರುವ ತಳಿಗಳನ್ನು, ಹೈಬ್ರಿಡ್ ಭತ್ತದ ಬೀಜಗಳನ್ನು ಮಾತ್ರ ಮಾರಾಟ ಮಾಡುವಂತೆ ಎಂದು ಸೂಚನೆ ನೀಡಿದರು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಜೊತೆಗೆ ರೈತರಿಗೆ ಬಿತ್ತನೆ ಬೀಜ ಸೇರಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಳಪೆ ಬಿತ್ತನೆ ಬೀಜ ಕಾನೂನು ಕ್ರಮ
ರೈತರು ಬಿತ್ತನೆ ಬೀಜ ಖರೀದಿಸಿದಾಗ ನಿಗದಿತ ನಮೂನೆಯಲ್ಲಿ ಬಿಲ್ಲನ್ನು ರೈತರ ಸಹಿಯೊಂದಿಗೆ ನೀಡಬೇಕು. ರೈತರು ಸಹ ಬಿತ್ತನೆ ಬೀಜ ಖರೀದಿಸಿದ ಸಂದರ್ಭದಲ್ಲಿ ಬಿಲ್ ಅನ್ನು ಪಡೆದು ಬಿಲ್ ಹಾಗೂ ಬಿತ್ತನೆ ಬೀಜದ ಬ್ಯಾಗ್ ಮೇಲೆ ಇರುವ ಟ್ಯಾಗನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮಾರಾಟಗಾರರು ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವುದು ಅಥವಾ ಸರ್ಕಾರದ ನಿಯಮ ಉಲ್ಲಂಘಿಸಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955, ಬೀಜ ಅಧಿನಿಯಮ 1966, ಬೀಜ ನಿಯಮಗಳು 1968 ಮತ್ತು ಬೀಜಗಳ ನಿಯಂತ್ರಣ ಆದೇಶ 1983 ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರ ವಿಶ್ವಾಸ ಗಳಿಸಿ ಜಿಲ್ಲೆಯಲ್ಲಿ 1,95,000 ಹೆಕ್ಟೇರ್ ಬಿತ್ತನೆಯಲ್ಲಿ ಪ್ರಮುಖವಾಗಿ ಕಬ್ಬು ಹಾಗೂ ಭತ್ತ ಬೆಳೆಯಲಾಗುತ್ರದೆ. ರೈತರು ಕೃಷಿ ಚಟುವಟಿಕೆ ನಡೆಸುವುದರಿಂದ ಕೃಷಿ ಇಲಾಖೆ ಹಾಗೂ ಬಿತ್ತನೆ ಬೀಜ ಮಾರಾಟ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು, ಬಿತ್ತನೆ ಬೀಜ ಮಾರಾಟಗಾರರು, ಸಮನ್ವಯವಾಗಿ ಕಾರ್ಯನಿರ್ವಹಿಸಿದರೆ ರೈತರಿಂದ ಯಾವುದೇ ದೂರು ಬರುವುದಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸಿ ರೈತರ ವಿಶ್ವಾಸ ಗಳಿಸಿ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್ ಅಶೋಕ್, ಮೈಸೂರು ವಿಭಾಗದ ಜಾಗೃತ ಕೋಶದ ಜಂಟಿ ನಿರ್ದೇಶಕಿ ಸುಜಾತ, ಮಂಡ್ಯ ಕೃಷಿ ಇಲಾಖೆಯ ಉಪನಿರ್ದೇಶಕಿ ಮಾಲತಿ, ಪಾಂಡವಪುರ ವಿಭಾಗದ ಸಹಾಯಕ ನಿರ್ದೇಶಕಿ ಮಮತಾ, ಕೆ.ವಿ.ಕೆ ಮುಖ್ಯಸ್ಥ ಡಾ.ನರೇಶ್, ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ನಿರ್ದೇಶಕ ಡಾ.ಶಿವಕುಮಾರ್ ಹಾಜರಿದ್ದರು.