ಮದ್ದೂರು ಸಮೀಪದ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಜುಲೈ 31 ರಂದು ಅಮೋಘ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮದರ್ಶಿ ಗೌಡಗೆರೆಯ ಜಿ.ಬಿ. ಮಲ್ಲೇಶ್ ತಿಳಿಸಿದರು.
ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಸನ್ನಿಧಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಶ್ರವಣಬೆಳಗೊಳ ಗೊಮ್ಮಟೇಶ್ವರನನ್ನು ಹೊರತುಪಡಿಸಿದರೆ ದೇಶದಲ್ಲೇ ಇದೇ ಮೊದಲ ಬಾರಿ ಶ್ರೀ ಗೌಡಗೆರೆ ಚಾಮುಂಡೇಶ್ವರಿ ದೇವಿಗೆ ಮಹಾಮಸ್ತಾಭಿಕಾಭಿಷೇಕ ನಡೆಯುತ್ತಿದೆ.
37,247 ಕೆ.ಜಿ. ವಿವಿಧ ದ್ರವ್ಯಗಳಿಂದ ಚಾಮುಂಡೇಶ್ವರಿ ದೇವಿಗೆ ಮಹಾಮಸ್ತಕಾಭಿಷೇಕ ನಡೆಸಲಾಗುವುದು. 5 ಕೆ.ಜಿ.ಕಾಶ್ಮೀರ್ ಕೇಸರಿ,ದ್ರಾಕ್ಷಿ, ಗೋಡಂಬಿ,ಕರ್ಜೂರ ಇದರ ಜೊತೆಗೆ ಹಾಲು,ಮೊಸರು, ತುಪ್ಪ ,ಎಳನೀರು ಸೇರಿದಂತೆ ಸುಮಾರು 47 ಬಗೆಯ ದ್ರವಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದರು.
ನಾಲ್ಕು ದಿನ ವಿವಿಧ ಪೂಜೆ
ಭೀಮನ ಅಮಾವಾಸ್ಯೆ ದಿನ 28 ರಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನಡೆಯಲಿದೆ.29 ರಂದು ಚಂಡಿಕಾ ಹೋಮ,30 ರಂದು ಪೂಜೆ ಹಾಗೂ 31 ರಂದು ಮಹಾಮಸ್ತಕಾಭಿಷೇಕ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರು,ಎಚ್.ಡಿ.ಕುಮಾರಸ್ವಾಮಿ,ಕೇಂದ್ರ ಸಚಿವ ರಾಜೀವ್ ಚಂದ್ರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
3 ವರ್ಷಕ್ಕೊಮ್ಮೆ ನಡೆಯಲಿದೆ
ಅಘೋರಿಗಳು ದೇವಸ್ಥಾನ ಪ್ರಾರಂಭ ಸಂದರ್ಭದಲ್ಲಿ ಮೂರು ವರ್ಷ ಇಲ್ಲದಿದ್ದರೆ ಐದು ವರ್ಷಕ್ಕೊಮ್ಮೆ ಈ ಮಹಾಮಸ್ತಾಭಿಷೇಕ ನಡೆಯಬೇಕು ಎಂದು ತಿಳಿಸಿದ್ದರು.ಅದರಂತೆ ಜುಲೈ 31 ರಂದು ಮೊದಲನೇ ಮಹಾಮಸ್ತಾಭಿಷೇಕ ನಡೆಯುತ್ತಿದೆ ಎಂದರು.
ಎಲ್ಲಾ ಸಮುದಾಯಕ್ಕೆ ಅವಕಾಶ
ಮಹಾಮಸ್ತಕಾಭಿಷೇಕದಲ್ಲಿ ಎಲ್ಲಾ ಸಮುದಾಯದ ಜನರಿಗೂ ಮುಕ್ತ ಪ್ರವೇಶವಿದೆ. ಭಕ್ತಾದಿಗಳು ಸ್ವತಃ ಅವರೇ ಈ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿರುತ್ತದೆ.
ಸುಮಾರು 10 ರಿಂದ 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬರುವ ನಿರೀಕ್ಷೆ ಇದೆ, ಬಂದ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬರುವ ಭಕ್ತಾದಿಗಳಿಗೆ ಮಹಾ ಮಸ್ತಾಭಿಷೇಕದಲ್ಲಿ ಬಳಸಿದ ದ್ರವ್ಯಗಳನ್ನು ಪ್ರಸಾದವಾಗಿ ವಿತರಿಸುವ ಒಂದು ಸಿದ್ಧತೆ ನಡೆಸಿಕೊಳ್ಳಲಾಗಿದೆ. ನಾಳೆಯಿಂದ ನಾಲ್ಕು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ದೇವಾಲಯಕ್ಕೆ ವಿಶೇಷವಾದ ದೀಪಾಲಂಕಾರ,ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದರು.
ಈ ಬಾರಿ ಸ್ವರ್ಣ ಲೇಪಿತ ವಿಗ್ರಹದ ಅನಾವರಣವನ್ನು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ನೆರವೇರಿಸಲಿದ್ದಾರೆ ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಲನಚಿತ್ರ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ಗಣ್ಯರು ಮಹಾಮಸ್ತಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಮಹಾಮಸ್ತಾಭಿಷೇಕಕ್ಕೆ ದೇಶ ವಿದೇಶಗಳಿಂದ ಹಾಗೂ ವಿವಿಧ ರಾಜ್ಯ,ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಲೋಹದ ಸಿಂಹ ನಿರ್ಮಾಣ
ಇನ್ನುಳಿದ ಮೂರು ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಿಯ ಹಿಂಭಾಗದಲ್ಲಿ ಸಿಂಹವನ್ನು 18 ಟನ್ ಲೋಹದಿಂದ ನಿರ್ಮಾಣ ಮಾಡಲಾಗುವುದು. ದೇವಿಯ ಹಿಂಭಾಗ ಬೆಟ್ಟ ಹಾಗೂ ನೀರಿನ ಜಲಪಾತ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕೆಳಭಾಗದಲ್ಲಿ ಮ್ಯೂಸಿಯಂ ಮಾಡಿ, ಬರುವ ಜನರಿಗೆ, ವಿದ್ಯಾರ್ಥಿಗಳಿಗೆ ದೇವಿಯ ದರ್ಶನವೂ ಆಗಬೇಕು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜ್ಞಾನ ಮೂಡಿಸುವ ಕೆಲಸ ಮಾಡಲಾಗುವುದು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರ ಪರಿಚಯ ಮಾಡಿಸುವ ನೀಲಿ ನಕ್ಷೆ ರೆಡಿಯಾಗಿದ್ದು,ಇನ್ನೆರಡು ವರ್ಷಗಳಲ್ಲಿ ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಭೂ ನ್ಯಾಯ ಮಂಡಳಿ ಸದಸ್ಯ ದಯಾನಂದ ಸಾಗರ್,ರಾಮಕೃಷ್ಣಯ್ಯ,ಬಸವರಾಜ್ ಉಪಸ್ಥಿತರಿದ್ದರು.