ಇದೇ ಮೊದಲ ಬಾರಿಗೆ ಮೇ 15ರಂದು ಅದ್ದೂರಿಯಾಗಿ ಮಂಡ್ಯದ ಸಾತನೂರಿನ ಕಂಬದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವವು ನೆರವೇರುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕ ಬಂಧುಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ, ಈ ಬ್ರಹ್ಮರಥೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ವಿಶ್ವಕರ್ಮ ಸಮಾಜದ ಆಧ್ಯಕ್ಷರಾದ ತಿರುಮಲಚಾರಿಯವರು ಮಂಡ್ಯದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ಮೇ ತಿಂಗಳ 11 ನೇ ತಾರೀಖಿನಿಂದ 18 ನೇ ತಾರೀಖಿನವರೆಗೂ ವಿಶ್ವಕರ್ಮ ಸಮಾಜದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಬ್ರಹ್ಮರಥೋತ್ಸವದ ಅಂಗವಾಗಿ ಇದೇ ತಿಂಗಳ 14 ರ ಶನಿವಾರದಂದು ವಿಶ್ವಕರ್ಮ ಸಮಾಜದ ಪರಮಪೂಜ್ಯ ಜಗದ್ಗುರುಗಳಾದ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು, ವಿಶ್ವಕರ್ಮ ಜಗದ್ಗುರು ಪೀಠ ಇವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಆ ದಿನ ಪೂರ್ತಿ ಗುರುಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಮಾಜದ ಬಂಧು-ಬಗಿನಿಯರು ಪಾಲ್ಗೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ.
ಮೇ 14ರ ಬೆಳಿಗ್ಗೆ 9 ಗಂಟೆಗೆ ವಿಶ್ವಕರ್ಮ ಪ್ರಾಥFನಾ ಮಂದಿರ, ಗಾಯಿತ್ರಿ ಬೀದಿ, ಮಂಡ್ಯ ಇಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಶ್ರೀಗಳನ್ನು ಹೊಳಲು ವೃತ್ತದಿಂದ ವಿಶ್ವಕರ್ಮ ಪ್ರಾರ್ಥನಾ ಮಂದಿರಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುವುದು.
ಶ್ರೀ ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಶ್ರೀ ಮಠಕ್ಕೆ ಆರ್ಥಿಕ ಸಹಾಯ ಬೇಕಾಗಿದೆ, ಆದ್ದರಿಂದ ಸಮಾಜದ ಎಲ್ಲಾ ಬಂಧುಗಳು ತಮ್ಮ ತನು-ಮನ-ಧನ ಸಹಾಯವನ್ನು ನೀಡಬೇಕೆಂದು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆನಂದ, ಸುದರ್ಶನ್, ಖಜಾಂಚಿ ರಮೇಶ್ ಉಪಸ್ಥಿತರಿದ್ದರು.