Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀನಿವಾಸ್ ಪ್ರಸಾದ್ ವಿಚಾರಧಾರೆ ಯುವಜನರಿಗೆ ಆದರ್ಶವಾಗಬೇಕು: ಸಿಎಂ ಸಿದ್ದರಾಮಯ್ಯ

“ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಬಡವರಿಗೆ ಸ್ವಾಭಿಮಾನವಿರಲೇಬೇಕು. ನಮ್ಮಲ್ಲಿ ಸ್ವಾಭಿಮಾನವಿದ್ದರೆ ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯ, ಇಲ್ಲದಿದ್ದರೆ ಗುಲಾಮಗಿರಿಗೆ ಗುರಿಯಾಗಬೇಕಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಅವರು ಎಂದೂ ಗುಲಾಮಗಿರಿಗೆ ಬಲಿಯಾಗಿರಲಿಲ್ಲ” ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಶನಿವಾರ ನಡೆದ ಹಿರಿಯ ರಾಜಕಾರಣಿ, ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, “ಶ್ರೀನಿವಾಸ್ ಪ್ರಸಾದ್ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದವರು. ಹಳೆಯ ತಲೆಮಾರಿನ ಈ ರಾಜಕೀಯ ಮುತ್ಸದ್ದಿಯ ನಿಧನದಿಂದ ಮಹತ್ತರವಾದ ರಾಜಕೀಯ ಕೊಂಡಿ ಕಳಚಿದಂತಾಗಿದೆ. ಅವರ ವಿಚಾರಧಾರೆಗಳು ಇಂದಿನ ಯುವಜನರಿಗೆ ಆದರ್ಶವಾಗಿರಬೇಕು” ಎಂದರು.

“ಮೊದಲು ಜನತಾ ದಳ ಪಕ್ಷದಿಂದ ಶ್ರೀನಿವಾಸ್ ಪ್ರಸಾದ್ ರವರು ಲೋಕಸಭೆ ಹಾಗೂ ನಂತರ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ ಶ್ರೀನಿವಾಸ್ ಪ್ರಸಾದ್ ಹಾಗೂ ನಾನು ಬೇರೆ ಪಕ್ಷಗಳಲ್ಲಿದ್ದರೂ, ನಮ್ಮಲ್ಲಿ ಪರಸ್ಪರ ಸ್ನೇಹ ಹಾಗೂ ಗೌರವಗಳಿದ್ದವು. ಅವರು ವಿವಿಧ ಪಕ್ಷಗಳಲ್ಲಿ ಹಲವು ನಾಯಕರೊಂದಿಗೆ ಸ್ನೇಹ ಹಾಗೂ ಒಡನಾಟವನ್ನು ಹೊಂದಿದ್ದರು. ಮನುಷ್ಯತ್ವದಿಂದ ಕೂಡಿದ ಸಜ್ಜನರು. ಅವರು ಯಾವುದೇ ಪಕ್ಷದಲ್ಲಿದ್ದರೂ, ಡಾ. ಅಂಬೇಡ್ಕರ್‌ ಅವರ ವಿಚಾರಧಾರೆಗಳ ಅನುಯಾಯಿಯಾಗಿದ್ದರು” ಎಂದು ಬಣ್ಣಿಸಿದರು.

ಸಂವಿಧಾನದ ಬಗ್ಗೆ ಅಪಾರ ಗೌರವ

“ಸಂವಿಧಾನದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವಕಾಶ ವಂಚಿತರಿಗೆ ಜಾತ್ಯತೀತವಾಗಿ ಸಮಾನ ಅವಕಾಶವನ್ನು ನೀಡಬೇಕೆಂಬುದನ್ನು ನಂಬಿ ಸಂವಿಧಾನದ ಬಗ್ಗೆ ಬದ್ಧತೆಯನ್ನು ಹೊಂದಿದ್ದರು. ಬುದ್ಧ, ಬಸವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ನಂಬಿ ನಡೆಯುವವರು ಎಂದಿಗೂ ಮನುಷ್ಯತ್ವವನ್ನು ಪಾಲಿಸುವವರಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪರಸ್ಪರ ಗೌರವಿಸಬೇಕೇ ಹೊರತು ದ್ವೇಷಿಸಬಾರದು. ರಾಜಕೀಯ ವೈರುದ್ಯಗಳಿಂದಾಗಿ ಪರಸ್ಪರ ಟೀಕಿಸುವುದು ಸ್ವಾಭಾವಿಕವಾಗಿದ್ದರೂ, ನಮ್ಮ ಸ್ನೇಹಕ್ಕೆಂದೂ ಧಕ್ಕೆ ಬಂದಿಲ್ಲ” ಎಂದರು.

“ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದ ನಂತರ, ನನ್ನ ಕೆಲವು ಶಾಸಕಮಿತ್ರರೊಂದಿಗೆ ಅವರನ್ನು ಭೇಟಿ ಮಾಡಿದ್ದೆ. ಅವರೊಂದಿಗಿನ ಅರ್ಧ ಗಂಟೆಯ ಭೇಟಿಯಲ್ಲಿ ನಮ್ಮ ಹಿಂದಿನ ಸ್ನೇಹ ಮರುಕಳಿಸಿತ್ತು. ನಮ್ಮ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆಯಲಿಲ್ಲ. ಆದರೆ ಶ್ರೀನಿವಾಸ್ ಪ್ರಸಾದ್ ಅವರು, ರಾಜಕೀಯದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿತ್ತು ಎಂದು ಹೇಳಿದ್ದರು” ಎಂದು ನೆನಪಿಸಿಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!