- ಸೆ.28 ರಿಂದ ಅ.2 ರವರೆಗೆ ದಸರಾ ಆಚರಣೆ
- ಅಶ್ವ ಪಡೆ, ಕಲಾತಂಡ ಹಾಗೂ ಸ್ಥಬ್ದಚಿತ್ರಗಳ ಮೆರವಣಿಗೆ
ಮಂಡ್ಯ ಜಿಲ್ಲಾಡಳಿತದ ವತಿಯಿಂದ ಸೆ.28 ರಿಂದ ಅ.2 ರವರೆಗೆ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.
ಬುಧವಾರ ಮಂಡ್ಯನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸೆ.28 ರಂದು ಮಧ್ಯಾಹ್ನ 3 ಗಂಟೆಯಿಂದ ಕಿರಂಗೂರಿನ ಬನ್ನಿಮಂಟಪದ ಬಳಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ, ಪುಷ್ಪಾರ್ಚನೆ, 108 ಕಳಸ ಪೂಜೆ, ಪೊಲೀಸ್ ಬ್ಯಾಂಡ್, ಅಶ್ವ ಪಡೆ, ಕಲಾತಂಡ ಹಾಗೂ ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯಲಿದೆ. ಸೆ 28 ರಂದು 6.30 ಕ್ಕೆ ಶ್ರೀರಂಗನಾಥ ಸ್ವಾಮಿ ದೇವಲಯದ ಮುಂಭಾಗದ ಶ್ರೀರಂಗ ವೇದಿಕೆಯಲ್ಲಿ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದರು.
ಮೆರವಣಿಗೆ ಸಾಗುವ ರಸ್ತೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಅವರು ರೋಡ್ ಡಿವೈಡರ್ ನಲ್ಲಿ ಸ್ವಚ್ಛತೆ ಪ್ರಾರಂಭ ಮಾಡಬೇಕು. ಬನ್ನಿಮಂಟಪದ ಹತ್ತಿರ ಮೆರವಣಿಗೆ ವೀಕ್ಷಣೆಗೆ ಗ್ಯಾಲರಿ ನಿರ್ಮಿಸಬೇಕು ಎಂದರು.
ಮ್ಯಾರಥಾನ್, ಕ್ರೀಡಾ ದಸರಾ ನಡೆಯುವ ಸ್ಥಳ, ಚಾರಣ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶ್ರೀರಂಗ ವೇದಿಕೆಯ ಹತ್ತಿರ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಯಾಗಬೇಕು ಎಂದರು.
ಯೋಗ ದಸರಾ, ಕ್ರೀಡಾ ದಸರಾ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಸ್ಟಾರ್ ನೈಟ್, ಜಲ ಸಹಾಸ ಕ್ರೀಡೆಗಳು, ಗಂಗಾರತಿ, ಕವಿಗೋಷ್ಠಿ, ಚರ್ಚಾ ಗೋಷ್ಠಿ, ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ದಿನಾಂಕ ನಿಗಧಿ ಮಾಡಲಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರ ವಿವರಗಳೊಂದಿಗೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು, ಸ್ಥಬ್ದಚಿತ್ರಗಳಿಗೆ ಸ್ಥಳ ನಿಗಧಿ ಮಾಡಬೇಕು. ನಿಗಧಿಯಾದ ರೀತಿಯಲ್ಲಿಯೇ ಮೆರವಣಿಗೆಯಲ್ಲಿ ಸಾಗಬೇಕು. ಇದಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿ.ಪಂ.ಸಿಇಒ ಶಾಂತಾ ಎಲ್.ಹುಲ್ಮನಿ, , ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯ, ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.