ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಜೆಡಿಎಸ್ ಪಕ್ಷ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು, ಎತ್ತಿನಗಾಡಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ, ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ, ಜೆಡಿಎಸ್, ಬಿಜೆಪಿ, ಜಯಕರ್ನಾಟಕ ಸಂಘಟನೆ, ಕಾವೇರಿ ನೀರು ಹಿತರಕ್ಷಣಾ ಸಮಿತಿ, ವರ್ತಕರು ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಎತ್ತಿನಗಾಡಿಯ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಆನಂತ್ರಾಂ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ನೀರು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಡಾ. ಕೆ ಅನ್ನದಾನಿ ಮಾತನಾಡಿ, ಪ್ರಸಕ್ತ ವರ್ಷ ಸರಿಯಾಗಿ ಮಳೆಯಾಗದೇ ಕೆಆರ್ಎಸ್ ಅಣೆಕಟ್ಟೆಯಲ್ಲಿ ಸಮರ್ಪಕವಾಗಿ ತುಂಬಿಲ್ಲದ ಪರಿಣಾಮ ಇಲ್ಲಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯಕ್ಕೆ ನೀರಿಲ್ಲದೇ ಪರಿತಪ್ಪಿಸುವಂತ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದರ ಮೂಲಕ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 5 ಸಾವಿರ ಕ್ಯೂಸೆಕ್ ನೀರನ್ನು ಬಿಡಿ ಎಂದು ಹೇಳಿದಿಯೇ ಹೊರತು ಸುಪ್ರಿಂಕೊರ್ಟ್ ನೀರು ಬಿಡಿ ಎಂದು ಹೇಳಿಲ್ಲ, ಆದರೇ ರಾಜಕೀಯ ಒಳ ಒಪ್ಪಂದದಿಂದಾಗಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದರ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ, ಕನ್ನಂಬಾಡಿಯಿಂದ ಯತ್ತಂಬಾಡಿಯವರೆಗೆ ಕಾವೇರಿ ನೀರು ಎಂಬ ಗಾದೆಯೇ ಇದೆ, ಆದರೂ ಮಳವಳ್ಳಿ ತಾಲ್ಲೂಕಿನ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದರು.
ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು, ತಾಲ್ಲೂಕಿನ ಕೆರೆ ಕಟ್ಟೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಬೇಕು, ರೈತರು ಬೆಳೆದಿರುವ ಬೆಳೆಗಳಿಗೆ ನೀರು ನೀಡಬೇಕೆಂದು ಆಗ್ರಹಿಸಿದರು.
ಕಾವೇರಿ ನೀರನ್ನು ನಿಲ್ಲಿಸುವವರೆಗೂ ಪ್ರತಿದಿನವೂ ವಿಭಿನ್ನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸೆ.30ರಂದು ರಕ್ತ ಕೊಡುತ್ತೇವೆ ನೀರು ಕೊಡುವುದಿಲ್ಲ ಎಂಬ ಸಂದೇಶವನ್ನು ನೀಡಲು ಕಾವೇರಿ ನದಿಗೆ ರಕ್ತ ಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಗೊಳಿಸಬೇಕೆಂದು ಕೋರಿದರು.
ಪ್ರತಿಭಟನಾಕಾರರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಭಾವಚಿತ್ರವನ್ನು ಪ್ರತಿಕೃತಿದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಎತ್ತಿನ ಗಾಡಿಯೊಂದು ಕಾರಿನ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಗಾಜು ಪುಡಿಯಾಗಿದ್ದು, ಮತ್ತೊಬ್ಬ ಗಾಯಗೊಂಡ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಬೋರೇಗೌಡ ತಾಲೂಕು ಅಧ್ಯಕ್ಷ ದೇವಿ ಪುರದ ಬಸವರಾಜು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಪುರ್ ಮಹೇಶ್. ಮುಖಂಡರಾದ ಕೆಂಪಯ್ಯ, ಚಿಕ್ಕರಾಜು, ಪುರಸಭೆ ಸದಸ್ಯರಾದ ಪ್ರಶಾಂತ್ಕುಮಾರ್, ನಂದಕುಮಾರ್, ನಾಗೇಶ್, ಜಯರಾಮು, ಮಹೇಶ್ ಬಸವರಾಜು, ಅನಂತು ಸೇರಿದಂತೆ ಇತರರು ಇದ್ದರು.