ಮಣಿಪುರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ಪಡೆದು ರಾಷ್ಟ್ರಪತಿ ಆಡಳಿತವನ್ನು ಜಾರಿಮಾಡಬೇಕೆಂದು ಜಿಲ್ಲಾ ಬಿಎಸ್ಪಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಜಿಲ್ಲಾ ಬಿಎಸ್ಪಿ ಪದಾಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಮಹಿಳೆರಯ ಬೆತ್ತಲೆ ಮೆರವಣಿಗೆ ಮತ್ತು ಹಿಂಸಾಚಾರ ತಡೆಯದೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಿ.ಎಂ.ಸ್ಥಾನಕ್ಕೆ ರಾಜಿನಾಮೆ ಕೊಡದಿದ್ದರೆ, ರಾಜ್ಯಪಾಲರು ಇವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಮಣಿಪುರದಲ್ಲಿ ಕಳೆದ ಮೇ 4ರಂದು ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿ, ನಾನಾ ರೀತಿ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆಯು, ಇಡೀ ದೇಶವೇ ತಲೆತಗ್ಗಿಸುವಂತಹ ಅಮಾನುಷ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೌರ್ಜನ್ಯವನ್ನು ತಡೆಗಟ್ಟಲು ಪ್ರಯತ್ನಿಸಿದ ಸಂತಸ್ಥೆ ಮಹಿಳೆಯ ತಮ್ಮನನ್ನು ಈ ಕಿರಾತಕರು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಈ ದೌರ್ಜನ್ಯವನ್ನು ಕರ್ನಾಟಕ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಗುಡುಗಿದರು.
ಮಣಿಪುರ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ವಾಸಮಾಡುವ ಕ್ರೈಸ್ತ ಸಮುದಾಯದ ಕುಕಿಗಳಿಗೂ ಮತ್ತು ಹಿಂದೂ ಸಮುದಾಯದ ಮೈಥೇಯಿ ಸಮುದಾಯಗಳ ಮಧ್ಯೆ ಕಳೆದ 30 ದಿನಗಳಿಂದಲೂ ಜನಾಂಗೀಯ ಘರ್ಷಣೆ ಉಂಟಾಗಿ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸುಮಾರು 156 ಜನ ಬಲಿಯಾಗಿದ್ದಾರೆ. ಕುಕಿ ಸಮುದಾಯದ ಸಾವಿರ ಮನೆಗಳನ್ನು, ಚರ್ಚುಗಳನ್ನು ಸುಟ್ಟುಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್, ಭಾರತ ದೇಶವು ಬಹುಭಾಷೆ, ಬಹುಜಾತಿ, ಬಹಧರ್ಮ, ಬಹುಸಂಸ್ಕೃತಿಯನ್ನು ಹೊಂದಿದ ದೇಶ, ಭಾರತ ದೇಶದಲ್ಲಿರುವ 140 ಕೋಟಿ ಜನರ ಪ್ರಾಣ, ಆಸ್ತಿ, ಮಾನ ರಕ್ಷಣೆ ಮಾಡುವುದು ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರವರು ಬರೆದ ಸಂವಿಧಾನದ ಆಶಯವಾಗಿದೆ, ಆದರೆ
ಇಷ್ಟೆಲ್ಲ ಅಮಾನುಷ ಕೃತ್ಯಗಳು ಕಳೆದ 80 ದಿನಗಳಿಂದ ನಡೆಯುತ್ತಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿಯವರು ನಮಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಕಣ್ಣುಮುಚ್ಚಿ ಕುಳಿತಿರುವುದು ನಾಚಿಕೆಗೇಡು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಬಿಎಸ್ಪಿ ಕಾರ್ಯಕರ್ತರು ಒತ್ತಾಯಿಸಿದರು.
ಕೂಡಲೇ ಘನವೆತ್ತ ರಾಷ್ಟ್ರಪತಿಗಳು ಮಣಿಪುರ ರಾಜ್ಯದ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ಪದಾಧಿಕಾರಿಗಳಾದ ಚಲುವರಾಜ್, ಆನಂದ್, ದಿನೇಶ್, ಅನಿಲ್ಕುಮಾರ್, ಶ್ಯಾಮಸುಂದರ್, ರಘು ಮತ್ತಿತರರಿದ್ದರು.