ಅಸೋಸಿಯೇಷನ್ ಆಫ್ ಫಿಜಿಷಿಯನ್ ಆಫ್ ಇಂಡಿಯಾ ಮಂಡ್ಯ ಶಾಖೆ ವತಿಯಿಂದ 41ನೇ ರಾಜ್ಯಮಟ್ಟದ ಫಿಜಿಷಿಯನ್ ವೈದ್ಯರ ಸಮ್ಮೇಳನವನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಜುಲೈ 26 ರಿಂದ ಜುಲೈ 28 ರ ವರೆಗೆ ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಶಿವಕುಮಾರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಸುಮಾರು 1,200ಕ್ಕೂ ಹೆಚ್ಚು ಮಂದಿ ವೈದ್ಯರು ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು ಈ ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ, ಚರ್ಚೆ, ಮೆಡಿಕಲ್ ಕ್ವಿಜ್ ಹಾಗೂ ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಎಂದರು.
ಜು.26ರಂದು ಸಂಜೆ 6ಗಂಟೆಗೆ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಎ.ಪಿ.ಐ ಸಂಘದ ಅಧ್ಯಕ್ಷರಾದ ಡಾ.ಜ್ಯೋತಿರ್ಮೈ ಪಾಲ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ ಎ ಶೇಖರ್, ಎಪಿಐ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಬಿ.ವಿ.ಮುರಳಿ ಮೋದನ್, ಡಾ.ಸುರೇಶ್ ವಿ ಸಾಗರ್ದ್, ಕಾರ್ಯದರ್ಶಿ ಕೆ ವಿಶ್ವನಾಥ್, ಮೋಹನ್ ಕುಮಾರ್, ಬೆಳ್ಳೂರಿನ ಏಮ್ಸ್ ನಿರ್ದೇಶಕ ಡಾ.ಎಂ.ಜಿ.ಶಿವರಾಮ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಡಾ.ಪ್ರಸನ್ನ ಕುಮಾರ್, ಡಾ.ರೇಖಾ, ಡಾ.ಮೋಹನ್ ಕುಮಾರ್, ಡಾ.ಉತ್ತಮ್ ಚಂದ್ ಹಾಗೂ ಡಾ.ರಾಘವೇಂದ್ರ ಉಪಸ್ಥಿತರಿದ್ದರು.