Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಹುದ್ದೆ ಕುರಿತು ಹೇಳಿಕೆ| ಸಚಿವರ ಮಾತಿಗೆ ಕಡಿವಾಣ ಹಾಕಲು ರಾಹುಲ್‌ ಗಾಂಧಿಗೆ ‘ಕೈ’ ನಾಯಕರ ಪತ್ರ

ಮುಖ್ಯಮಂತ್ರಿ ಹುದ್ದೆ ಸಂಬಂಧ ಹಿರಿಯ ಸಚಿವರು ಸೇರಿ ಆರಕ್ಕೂ ಹೆಚ್ಚು ನಾಯಕರು ‘ಮುಖ್ಯಮಂತ್ರಿಯಾಗಲು ನಾನು ಅರ್ಹ’ ಎಂದು ಬಹಿರಂಗ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ಪಕ್ಷ ಮುಜುಗರ ಅನುಭವಿಸುವಂತಾಗಿದೆ. ಸ್ವಪಕ್ಷ ನಾಯಕರ ಹೇಳಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಎಚ್ಚರಿಕೆ ಕೊಡುವಂತೆ ಕೋರಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರಿಗೆ ಕಾಂಗ್ರೆಸ್​ ಕೆಲವು ನಾಯಕರು ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ನಾಯಕರಾದ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್​, ಹೆಚ್ ಎಂ ರೇವಣ್ಣ, ಎಲ್ ಹನುಮಂತಯ್ಯ, ಪ್ರಕಾಶ್​ ರಾಥೋಡ್, ಸಿ ಎಸ್ ದ್ವಾರಕಾನಾಥ್​ ಹಾಗೂ ರಾಣಿ ಸತೀಶ್ ಸೇರಿ 15 ಮಂದಿ ಹಿರಿಯ ಕಾಂಗ್ರೆಸ್​ ಮುಖಂಡರು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಎಐಸಿಸಿ ವರಿಷ್ಠ ಕೆ ಸಿ ವೇಣುಗೋಪಾಲ್‌ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೂ ಕಳುಹಿಸಿಕೊಡಲಾಗಿದೆ.

ಸಚಿವರು ಸೇರಿ ಆರಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಡುವ ಬದಲು ಸಿಎಂ ಹುದ್ದೆ ಸಂಬಂಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ‌. ಇದರಿಂದ ನಮ್ಮ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಪಕ್ಷ ಹಾಗೂ ಸರ್ಕಾರದ ಮೇಲೆ ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ, ರಾಜ್ಯದ ಆಡಳಿತವೂ ದೊಡ್ಡ ಮಟ್ಟಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಎಂ ಹುದ್ದೆ ಸಂಬಂಧ ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಮುಂದೆ ಪಕ್ಷದ ಹಿತದೃಷ್ಟಿಯಿಂದ ಇಂತಹ ಹೇಳಿಕೆಗಳನ್ನು ನೀಡದಂತೆ ನಿರ್ದೇಶಿಸುವಂತೆ ಕೈ ನಾಯಕರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಪರಿಶ್ರಮದಿಂದ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಭರವಸೆ ನೀಡಿದಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್​​ ಜಂಟಿಯಾಗಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ವಿಚಾರವನ್ನು ಎತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ರಾಜ್ಯಪಾಲರಿಂದ ತನಿಖೆಗೆ ಪೂರ್ವಾನುಮತಿ ಪಡೆಯುವಲ್ಲಿ ಯಶ ಕಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಡಾ ವಿಚಾರವಾಗಿ ಸಿದ್ದರಾಮಯ್ಯರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವಪಕ್ಷದ ನಾಯಕರೇ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಪಕ್ಷ ಮತ್ತಷ್ಟು ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಕೆಲವು ನಾಯಕರು ಮನಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದರಿಂದ ಇಡೀ ಕಾಂಗ್ರೆಸ್‌ ಪಕ್ಷದಲ್ಲಿ ನೈತಿಕಸ್ಥೈರ್ಯ ಕುಸಿಯುವಂತೆ ಆಗಿದೆ. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ. ಇಂತಹ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್‌ ಪಕ್ಷದ ಆರಕ್ಕಿಂತ ಹೆಚ್ಚು ನಾಯಕರು ಮುಖ್ಯಮಂತ್ರಿ ಹುದ್ದೆ ತಮಗೇ ಸಿಗಬೇಕು ಎಂದು ಪ್ರತಿನಿತ್ಯ ಹೇಳಿಕೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಮನಸೋ ಇಚ್ಛೆ ಹೇಳಿಕೆ ನೀಡುತ್ತಿರುವುದರಿಂದ ನಮ್ಮ ನಾಯಕತ್ವ ಮತ್ತು ಕಾರ್ಯಕರ್ತರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಪಕ್ಷದ ಮೇಲೆ ಭರವಸೆ ಕುಸಿಯುತ್ತಿದೆ. ಕರ್ನಾಟಕದ ಜನರಿಗೂ ಸಹ ಸರ್ಕಾರದ ಮೇಲೆ ವಿಶ್ವಾಸ ಕುಂದುತ್ತಿದೆ. ಸರ್ಕಾರದ ಆಡಳಿತ ಕೆಲಸಗಳಿಗೂ ಇದರಿಂದ ಧಕ್ಕೆಯುಂಟಾಗಿದೆ. ಕೂಡಲೇ ಸಚಿವರ ಹೇಳಿಕೆಗೆ ಕಡಿವಾಣ ಹಾಕಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!