ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ವಿವಿಧ ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ವಾಮಿ, ‘ಬಿಜೆಪಿಯಲ್ಲಿರುವ ನಾವು ನಮ್ಮ ಪಕ್ಷ ಟೈಟಾನಿಕ್ ಹಡಗು ಮುಳುಗಿದಂತೆ ಮುಳುವುದನ್ನು ನೋಡಲು ಬಯಸುವುದಾದರೆ, ಅದರ ನೇತೃತ್ವವನ್ನು ಮೋದಿ ಅವರೇ ವಹಿಸುವುದು ಉತ್ತಮ. ಶಾಶ್ವತವಾಗಿ ಮುಳುಗಲಿರುವ ಬಿಜೆಪಿಯಲ್ಲಿ ಬಿರುಕುಮೂಡಿದೆ ಎಂಬುದನ್ನು ಉಪ ಚುನಾವಣೆ ಫಲಿತಾಂಶ ತೋರಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಫಲಿತಾಂಶ ಜುಲೈ 13ರಂದು ಪ್ರಕಟವಾಗಿದೆ. ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ 10 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಕಡೆ ಗೆದ್ದಿದ್ದಾರೆ. ಇಂಡಿಯಾ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಹಾಗೂ ಟಿಎಂಸಿ ತಲಾ 4 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಎಎಪಿ ಮತ್ತು ಡಿಎಂಕೆ ಒಂದೊಂದು ಕಡೆ ಜಯಗಳಿಸಿವೆ.
2024ರ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸೋಲುಕಂಡಿದ್ದ ಬಿಜೆಪಿ, ಉಪ ಚುನಾವಣೆಯಲ್ಲಿ ಉತ್ತರಾಖಂಡದ ಬದರಿನಾಥದಲ್ಲಿ ಮುಗ್ಗರಿಸಿದೆ. ಇದರ ಬೆನ್ನಲ್ಲೇ , ಹಿಂದುತ್ವ ಪರ ಮತದಾರರು ಕೇಸರಿ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿ ಅವರು ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದಾರೆ.