ಆಜ್ ತಕ್ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ತಮ್ಮ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಯೋಜನೆಯ ಬಗ್ಗೆ ತಪ್ಪು ಮಾಹಿತಿ ರವಾನಿಸಿದ್ದು, ಇದೀಗ ಅವರ ವಿರುದ್ಧ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆಜ್ ತಕ್ ವಿಡಿಯೋವನ್ನು ಡಿಲಿಟ್ ಮಾಡಿರುವುದು ಕಂಡು ಬಂದಿದೆ.
ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳುಸುದ್ದಿ ಪ್ರಸಾರ ಮಾಡಿದ ಬಗ್ಗೆ ಬೆಂಗಳೂರಿನಲ್ಲಿ ಕೆಎಂಡಿಸಿ ಅಧಿಕಾರಿ ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆಜ್ ತಕ್ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಿಂದ ವಿಡಿಯೋ ‘ಡಿಲೀಟ್’ ಮಾಡಿದ್ದಾರೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ‘ಡಿಲೀಟ್’ ಮಾಡಿರುವ ಹಿನ್ನೆಲೆಯಲ್ಲಿ ‘ಆಜ್ ತಕ್’ ಮತ್ತು ಸುಧೀರ್ ಚೌಧರಿಯನ್ನು ಪ್ರಶ್ನಿಸಿರುವ ನೆಟ್ಟಿಗರು, ನೀವು ತಪ್ಪು ಮಾಡಿಲ್ಲ ಎಂದಾದರೆ, ಯೂಟ್ಯೂಬ್ ಮತ್ತು ಟ್ವಿಟ್ಟರ್ನಿಂದ ವಿಡಿಯೋ ಯಾಕೆ ಡಿಲೀಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಆಜ್ ತಕ್ (Aaj Tak) ಪತ್ರಕರ್ತ ಸುಧೀರ್ ಚೌಧರಿ, ತಮ್ಮ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಾಹನ ಸಬ್ಸಿಡಿ ಕಾರ್ಯಕ್ರಮದ ಬಗ್ಗೆ ತಪ್ಪು ಮಾಹಿತಿ ರವಾನಿಸಿದ್ದಾರೆ. Aaj Tak ವರದಿಯಲ್ಲಿ ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಸಬ್ಸಿಡಿ ನೀಡಿದ್ದು, ಹಿಂದೂಗಳಿಗೆ ಇಲ್ಲ ಎಂದು ವರದಿಗೆ ತಲೆ ಬರಹವನ್ನು ನೀಡಿತ್ತು.
ವರದಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಬಡ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಮಾತ್ರ ಆಟೋರಿಕ್ಷಾ ಅಥವಾ ಟ್ಯಾಕ್ಸಿ ಖರೀದಿಯಲ್ಲಿ 50% ಸಬ್ಸಿಡಿ ನೀಡುತ್ತದೆ. ಕರ್ನಾಟಕದಲ್ಲಿ ಯಾರಾದರೂ ಅಲ್ಪಸಂಖ್ಯಾತ ಸಮುದಾಯದವರಲ್ಲದ ಬಹುಸಂಖ್ಯಾತ ಸಮಾಜದಲ್ಲಿ ಜನ್ಮ ಪಡೆದರೆ ಅವರು ಎಷ್ಟೆ ಬಡವರಾಗಿದ್ದರೂ ಅವರಿಗೆ ಸಿಗುವುದಿಲ್ಲ. ಈ ಯೋಜನೆ ಹಿಂದೂಗಳಿಗೆ ಇಲ್ಲ. ಅವರೆಷ್ಟೇ ಬಡವರೇ ಆಗಿರಲಿ, ಅವರ ಬಳಿ ಹಣವೇ ಇಲ್ಲದಿರಲಿ, ಅವರಿಗೆ ಸಬ್ಸಿಡಿ ಸಿಗುವುದಿಲ್ಲ. ಆದರೆ ಯೋಜನೆಯಲ್ಲಿ ಇತರ ಮುಸ್ಲಿಂ, ಬೌದ್ಧ ,ಜೈನ ಇತರ ಅಲ್ಪಸಂಖ್ಯಾತರಿಗೆ 50% ಸಬ್ಸಿಡಿ ನೀಡಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.