”ಇವತ್ತಿನ ದಿನ ಸಂತೋಷ ಆಗಿದೆ, ಏಕೆಂದರೆ ನನ್ನ ಜೀವನದಲ್ಲಿ ಮೊದಲ ಚುನಾವಣೆ ಸ್ಪರ್ಧೆ ಮಾಡುತ್ತಿದ್ದೇನೆ, ನನ್ನ ಮೊದಲ ಚುನಾವಣೆಯ ಪ್ರಚಾರ ಮಾತ್ರ ನನ್ನ ತಂದೆಯ ಹುಟ್ಟೂರಿನಿಂದ ಪ್ರಾರಂಭಿಸುತ್ತಿದ್ದೇನೆ, ಇದು ಖುಷಿ ತಂದಿದೆ” ಎಂದು ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬೃಹತ್ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಉಪ ಚುನಾವಣೆಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳೋದು ಅಸಾಧ್ಯ ಎಂದು ತಿಳಿದುಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿದ್ದು ನೀವು. ಒಕ್ಕಲಿಗರು, ವೀರಶೈವರು, ದಲಿತರು, ಹಾಲುಮತ ಸಮಾಜ, ಅಲ್ಪಸಂಖ್ಯಾತರು ಎಲ್ಲರೂ ಮತ ಕೊಟ್ಟು ಯಡಿಯೂರಪ್ಪ ಸಿ ಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಾಗ ವಿಪಕ್ಷಗಳು ಮನೆಯಲ್ಲಿ ಕೂರುತ್ತಾರೆ ಎಂದು ಭಾವಿಸಿದ್ರು, ಆದರೆ ಯಡಿಯೂರಪ್ಪನವರು ಮನೆಯಲ್ಲಿ ಕೂರಲಿಲ್ಲ. ಬದಲಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತಿದ್ದಾರ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಯಡಿಯೂರಪ್ಪ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ. ನಾರಾಯಣಗೌಡರು ಕ್ಷೇತ್ರಕ್ಕೆ 1,800 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ. ಈಗ ಘೋಷಣೆ ಆಗಿರೋ ಚುನಾವಣೆಯಲ್ಲೂ ಗೆಲ್ಲಿಸಿ. ಮೊದಲ ಫಲಿತಾಂಶ ಬಿಜೆಪಿಯದ್ದೇ ಇರುತ್ತೆ. ಅದರಲ್ಲೂ ಕೆ.ಆರ್.ಪೇಟೆ ಮೂಲಕವೇ ಮೊದಲ ಸ್ಥಾನ ಗೆಲ್ಲಲಿದ್ದೇವೆ, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ ಎಂದರು.
ಸಚಿವ ಕೆ. ಸಿ ನಾರಾಯಣಗೌಡ ಮಾತನಾಡಿ, ಜೆಡಿಎಸ್ನಲ್ಲಿ ಎರಡು ಬಾರಿ ಶಾಸಕನಾಗಿದ್ದೆ. ಆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಏನೂ ಅಭಿವೃದ್ಧಿ ಮಾಡಲು ಆಗಿರಲಿಲ್ಲ. ನಮ್ಮ ತಾಲೂಕಿನ ಸುಪುತ್ರ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ನನ್ನ ಕ್ಷೇತ್ರ ಅಭಿವೃದ್ಧಿ ಎಂದು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದೆ. ರಾಜ್ಯದಲ್ಲಿ ನುಡಿದಂತೆ ನಡೆಯುವವರು ಯಾರಾದ್ರೂ ಇದ್ರೆ ಯಡಿಯೂರಪ್ಪ ಮಾತ್ರ. ನಾನು ಬಿಜೆಪಿ ಸೇರಿದ ಬಳಿಕ ಮತ್ತೆ ಸಿಎಂ ಆದರು ಅದರಂತೆಯೇ ನನ್ನ ತಾಲೂಕಿಗೆ 1800 ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.
ರಾಜ್ಯ ಕುರಿ ಉಣ್ಣೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶರಣು ಹುಲ್ಲೂರು, ಪುರಸಭೆ ಅಧ್ಯಕ್ಷೆ ಮಹಾದೇವಿ, ಮುಖಂಡರಾದ ಕಿಕ್ಕೇರಿ ಪ್ರಭಾಕರ್, ಶೀಳನೆರೆ ಅಂಬರೀಶ್, ಕೆ.ಪಿ.ಜಯಂತ್, ಪಾಂಡವಪುರ ಬಿಜೆಪಿ ಅಭ್ಯರ್ಥಿ ಇಂದ್ರೇಶ್, ಹೆಚ್.ಆರ್.ಲೋಕೇಶ್, ಸಚಿವರ ಆಪ್ತ ಸಹಾಯಕ ದಯಾನಂದ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಹಾಪ್ ಕಮ್ಸ್ ಅಧ್ಯಕ್ಷ ಕೆ.ಜಿ. ತಮ್ಮಣ್ಣ ಉಪಸ್ಥಿತರಿದ್ದರು.