ಮಂಡ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ನಾಯಕರು ನನಗೆ ಟಿಕೆಟ್ ನೀಡಿದರೆ, ಸಂಸದೆ ಸುಮಲತಾ ಅಂಬರೀಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಅವರ ಬೆಂಬಲ ಕೇಳ್ತೇನೆ, ನಾನೇನು ಅವರಿಗೆ ಹೊಸಬನಲ್ಲ, ಈ ಹಿಂದೆ ಅಂಬರೀಶ್ ಅವರ 6 ಚುನಾವಣೆಗಳಲ್ಲೂ ಅವರ ಜೊತೆಗಿದ್ದು, ದುಡಿದಿದ್ದೇನೆ, ಹಾಗಾಗಿ ಅವರು ನನಗೆ ಬೆಂಬಲ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಅಂಬರೀಶ್ ಕುಟುಂಬದವರೊಂದಿಗೆ ಉತ್ತಮ ಸಂಬಂಧವಿದೆ, ಮುಂದಿನ ದಿನಗಳಲ್ಲಿ ಅವರ ಬೆಂಬಲ ಪಡೆಯುತ್ತೇನೆಂದರು. ಇವತ್ತು ಚುನಾವಣೆಗೆ ಹಣಬಲ, ಜನಬಲ ಎರಡೂ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಓಪನ್ ಸಿಕ್ರೇಟ್, ಇಂದು ಹಣವಿಲ್ಲದೆ ಚುನಾವಣೆ ಎದರಿಸೋಕೆ ಅಗುತ್ತಾ…ಆಗಲ್ಲ. ಆದ್ದರಿಂದ ನಮ್ಮ ನಾಯಕರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ದುಡಿಯುತ್ತೇವೆ ಎಂದರು.
ಕಳೆದ ಬಾರಿ ಕಿತ್ತಾಟದಿಂದ ಸೋಲು
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಕೆಲವರ ಕಿತ್ತಾಟದಿಂದ ಕಾಂಗ್ರೆಸ್ ಪಕ್ಷ ಸೋಲುವಂತಾಯಿತು. ಈ ಹಿಂದೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ ಆನಂತರ ಕೆಲವು ಕಾರಣಗಳಿಂದಾಗಿ ಜೆಡಿಎಸ್ ಗೆಲುವು ಸಾಧಿಸುತ್ತಾ ಬಂತು. ಕಳೆದ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿದ್ದರು. ಆದರೆ ಅವರನನ್ನು ನಾಯಕರು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿಲ್ಲ. ಆದರಿಂದ ಸೋಲಾಯಿತು. ಆದರೆ ಈ ಭಾರಿ ಹಾಗೇ ಆಗಲು ಬಿಡುವುದಿಲ್ಲ. ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಪಕ್ಷವನ್ನು ಗೆಲ್ಲಿಸಲು ದುಡಿಯುತ್ತೇವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನಲ್ಲಿ ಅಧಿಕಾರ ಕಳೆದುಕೊಳ್ಳಲು ಅಮರಾವತಿ ಚಂದ್ರಶೇಖರ್ ಸಹೋದರರು ಕಾರಣರೇ ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಪಕ್ಷದ ಸೂಚನೆಯಂತೆ ನಡೆದುಕೊಂಡಿದ್ದೇವೆ. ಯಾವತ್ತು ಪಕ್ಕೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಜ.22ರಂದು ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಬೃಹತ್ ಕಾಂಗ್ರೆಸ್ ಕಾರ್ಯಕರ್ತ ಸಭೆಯನ್ನು ಮುಂದಿನ ಭಾನುವಾರ ಅಂದರೆ, ಜ.22ರಂದು ಮಧ್ಯಾಹ್ನ 12 ಗಂಟೆಗೆ ಸುಶೀಲಮ್ಮ ಕನ್ವೆಷನ್ ಹಾಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಅಮರಾವತಿ ಚಂದ್ರಶೇಖರ್, ಈ ಕಾರ್ಯಕ್ರಮಕ್ಕೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಬೇಕೆಂದು ಕೋರಿದರು.
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಡಿ.ಕೆ.ಸುರೇಶ್, ಪಿ.ಎಂ.ನರೇಂದ್ರಸ್ವಾಮಿ, ಧ್ರುವನಾರಾಯಣ್, ಜೆ.ಸಿ.ಚಂದ್ರಶೇಖರ್, ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಎಂ.ಎಸ್.ಆತ್ಮಾನಂದ ಸೇರಿದಂತೆ 16 ಮಂದಿಯು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಸುಮಾರು 12 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಸಿ.ಆನಂದ್, ಯೋಗೇಶ್, ಪುನೀತ್, ಗಿರೀಶ್ ಪಟೇಲ್, ಅನಿಲ್ ಕುಮಾರ್ ಮತ್ತು ಶಂಕರ್ ಉಪಸ್ಥಿತರಿದ್ದರು.