Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳದ ಸುಮಲತಾ… ಬಿಜೆಪಿಯೇ ಸೈಡ್ ಲೈನ್ ಮಾಡಿತೇ….!

ಬಿಜೆಪಿಗೆ ಸೇರಿದ್ದು ನನ್ನ ಜೀವನದಲ್ಲೇ ಮಹತ್ವದ ಸುದಿನ” ಎಂದು ಹೇಳಿಕೆ ನೀಡಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಈಗ ಬಿಜೆಪಿ ಮುಂದಾಳತ್ವದಲ್ಲಿ ತಮ್ಮ ಭಾಗದಲ್ಲೇ ‘ಮೈಸೂರು ಚಲೋ ಪಾದಯಾತ್ರೆ ಹಾದುಹೋಗುತ್ತಿದ್ದರೂ ಎಲ್ಲೂ ಕಾಣಿಸಿಕೊಳ್ಳದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಸುಮಲತಾ ಅಂಬರೀಶ್‌ ಅವರ ಗೈರು, ಎಚ್‌ ಡಿ ಕುಮಾರಸ್ವಾಮಿ ಕಾರಣಕ್ಕೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಸೈಡ್‌ ಲೈನ್‌ ಮಾಡುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಮುಂಗಾರು ಅಧಿವೇಶನದ ಕೊನೆ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಅವರು ಜಂಟಿಯಾಗಿ ಮೈಸೂರು ಚಲೋ ಪಾದಾಯತ್ರೆ ಘೋಷಿಸುತ್ತಿದ್ದಂತೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಜೆಡಿಎಸ್‌ ಬೆಂಬಲ ಇಲ್ಲವೆಂದು ನೇರವಾಗಿ ಘೋಷಿಸಿದ್ದರು.

ಕುಮಾರಸ್ವಾಮಿ ಮಾತು ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಎದ್ದು ಬಿದ್ದು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಪಾದಯಾತ್ರೆಗೆ ಬರುವಂತೆ ಮನವೊಲಿಸಿದರು.

ಕುಮಾರಸ್ವಾಮಿ ಕೆಲವು ಷರತ್ತುಗಳೊಂದಿಗೆ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. “ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಲು ಕಾರಣ ಪ್ರೀತಂಗೌಡ. ದೇವೇಗೌಡರ ಕುಟುಂಬಕ್ಕೆ ವಿಷವಿಟ್ಟವರ ಜೊತೆ ನಾನು ವೇದಿಕೆ ಹಂಚಿಕೊಳ್ಳಲಾರೆ” ಎಂದು ನೇರವಾಗಿ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಆದರೆ, ಪಾದಯಾತ್ರೆ ಉದ್ಘಾಟನೆಗೆ ಬಂದು ಭಾರೀ ಭಾಷಣ ಮಾಡಿದ್ದರು. ಆದರೆ, ವೇದಿಕೆಗಳಲ್ಲಿ ಎಲ್ಲೂ ಪ್ರೀತಂಗೌಡ ಕಾಣಿಸಿಕೊಂಡಿಲ್ಲ. ಐದನೇ ದಿನಾವಾದ ಇಂದೂ ಪ್ರೀತಂ ಕಾಣಿಸಿಕೊಂಡಿಲ್ಲ.

ಈಗ ಸುಮಲತಾ ಅಂಬರೀಶ್‌ ಕೂಡ ಪಾದಯಾತ್ರೆಯಿಂದ ದೂರ ಉಳಿದಿದ್ದಾರೋ ಅಥವಾ ದೂರ ಉಳಿಸಿದ್ದಾರೋ ಗೊತ್ತಿಲ್ಲ. ಆದರೆ, ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಹಾಕಿದ ಷರತ್ತುಗಳಲ್ಲಿ ಸುಮಲತಾ ಕೂಡ ಭಾಗಿಯಾಗಬಾರದು ಎಂಬ ಷರತ್ತು ವಿಧಿಸಿದ್ದಾರೆ ಎಂಬ ಮಾತುಗಳು ಪಾದಯಾತ್ರೆಯಲ್ಲಿ ಭಾಗವಹಿಸಿರುವ ಜನರಿಂದಲೇ ಕೇಳಿ ಬರುತ್ತಿವೆ.

ಹಳೆಯ ದ್ವೇಷ ಸಾಧನೆಗೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಟಿಕೆಟ್‌ ಅನ್ನು ಸುಮಲತಾ ಅವರಿಗೆ ಕುಮಾರಸ್ವಾಮಿ ಕೈ ತಪ್ಪಿಸಿ, ತಾವೇ ಅಭ್ಯರ್ಥಿಯಾಗಿದ್ದು ಜನರಿಗೆ ಗೊತ್ತಿರುವ ವಿಚಾರ. ಸುಮಲತಾ ಬಿಜೆಪಿ ಸೇರಿದ್ದರೂ ಎಲ್ಲೂ ಕೂಡ ಕುಮಾರಸ್ವಾಮಿಗೆ ನನ್ನ ಬೆಂಬಲ ಇದೆ ಎಂದು ಹೇಳಿಕೊಂಡಿಲ್ಲ. ಜೊತೆಗೆ ಪ್ರಚಾರದಲ್ಲಿ ಎಲ್ಲೂ ಕಾಣಿಸಲಿಲ್ಲ.

ಹೀಗಾಗಿಯೆ ಮೈಸೂರು ಚಲೋ ಪಾದಯಾತ್ರೆಯಲ್ಲಿ ಸುಮಲತಾ ಭಾಗಿಯಾಗಬಾರದು ಎಂಬ ಷರತ್ತನ್ನು ಕುಮಾರಸ್ವಾಮಿ ವಿಧಿಸಿರಬಹುದಾ? ಎನ್ನುವ ಅನುಮಾನದ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ ಮುಖಂಡರು ಇರುವ ಬ್ಯಾನರ್‌ನಲ್ಲೂ ಕೂಡ ಸುಮಲತಾ ಅಂಬರೀಶ್ ಫೋಟೋ ಬಳಕೆಯಾಗಿಲ್ಲ.

ಪಾದಯಾತ್ರೆ ವೇಳೆ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೋಮಶೇಖರ್ ಬೇಲೂರು ಮಾಧ್ಯಮಗಳೊಂದಿಗೆ ಮಾತನಾಡಿ, “ಸುಮಲತಾ ಅಂಬರೀಶ್ ಬ್ಯಾನರ್‌ನಲ್ಲಿ ಇಲ್ಲದಿರಬಹುದು. ಆದರೆ ಅವರು ಜನರ ಮನಸ್ಸಿನಲ್ಲಿದ್ದಾರೆ. ಬಿಜೆಪಿಯವರು ಅಂಬರೀಶ್ ಅಭಿಮಾನಿಗಳನ್ನು ಕೂಡ ಪಾದಯಾತ್ರೆಗೆ ಆಹ್ವಾನಿಸಿಲ್ಲ. ಬಿಜೆಪಿ ಜೊತೆ ನಿಜಕ್ಕೂ ಸುಮಲತಾ ಇದ್ದಾರೆಯೇ ಎನ್ನುವ ಅನುಮಾನ ನಮಗೆ ಕಾಡುತ್ತಿದೆ”‌ ಎಂದರು.

ಮುಂದುವರಿದು, “ಪಾದಯಾತ್ರೆಗೆ ಮಂಡ್ಯದಲ್ಲೂ ಸುಮಲತ ಅಂಬರೀಶ್ ಭಾಗಿಯಾಗುವುದು ಅನುಮಾನವಿದೆ. ನಮ್ಮ ನಾಯಕರನ್ನು ಹೀಗೆ ಸೈಡ್‌ ಲೈನ್‌ ಮಾಡುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ” ಎಂದು ಬಿಜೆಪಿ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!