ನಾಗಮಂಗಲದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಸಂಸದೆ ಸುಮಲತಾ ಅಂಬರೀಶ್ ಕಾಂಗ್ರೆಸ್ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿದ ವಿಚಾರವಾಗಿ ಮಾತನಾಡಿದ ಸುಮಲತಾ, ”ನನ್ನ ನಡೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತರಿಸಿದ್ರೆ, ನೋವುಂಟು ಮಾಡಿದ್ರೆ ಕ್ಷಮೆಯಾಚಿಸುತ್ತೇನೆ. ಆದರೆ ನಿಮ್ಮ ನಾಯಕರ ನಡೆಗೆ ನಾನು ಹೊಣೆ ಅಲ್ಲ” ಎಂದು ಭಾವುಕರಾದರು.
ನಿಮ್ಮ ರಾಜ್ಯಾಧ್ಯಕ್ಷರು ನನ್ನ ಬಗ್ಗೆ ಕೊಟ್ಟಿರುವ ಹೇಳಿಕೆಗಳನ್ನು ಗಮನಿಸಿ. ಆ ನಂತರ ನನ್ನ ನಿರ್ಧಾರ ಬಗ್ಗೆ ಪ್ರಶ್ನೆ ಮಾಡಿ ಎಂದ ಅವರು, ಬಿಜೆಪಿ ಪಕ್ಷದ ಅತ್ಯಂತ ಗೌರವದಿಂದ ಆಹ್ವಾನಿಸಿದರು ಎಂದು ತಿಳಿಸಿದ್ದಾರೆ.
ರಸ್ತೆಗೆ ಅಂಬರೀಶ್ ಹೆಸರಿಟ್ಟಿದ್ದು ಬಿಜೆಪಿ
ನೀವು ಪಕ್ಷಕ್ಕೆ ಬಂದ್ರೆ ನಮಗೆ ಶಕ್ತಿ ಸಿಗಲಿದೆ ಎಂಬ ಮಾತು ಹೇಳಿದ್ರು. ಬಿಜೆಪಿ ಸರ್ಕಾರ ಬೆಂಗಳೂರು – ಮೈಸೂರಲ್ಲಿ ರಸ್ತೆಗೆ ಅಂಬರೀಶ್ ಹೆಸರಿಟ್ಟಿದ್ದಾರೆ. 12 ಕೋಟಿ ವೆಚ್ಚದಲ್ಲಿ ಸುಂದರ ಸ್ಮಾರಕ ನಿರ್ಮಿಸಿದ್ದಾರೆ. ಅಂಬರೀಶ್ ಅವರು ಬಿಜೆಪಿ ಪಕ್ಷದಲ್ಲಿದ್ರಾ? 27 ವರ್ಷ ಕಾಂಗ್ರೆಸ್ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ಜೆಡಿಎಸ್ನ ಹಲವರು ಅಂಬರೀಶ್ ಆತ್ಮೀಯರು ಎಂದು ಹೇಳಿಕೊಂಡು ಓಡಾಡ್ತಿದ್ದಾರೆ. ಆತ್ಮೀಯತೆ ಇದ್ದ ಮೇಲೆ ಅಧಿಕಾರದಲ್ಲಿದ್ದಾಗ ಇವರೇಕೆ ಸ್ಮಾರಕ ಮಾಡುವ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಂಬರೀಶ್ ಅವರನ್ನು ಕೊನೆಯ ಎರಡು ವರ್ಷ ಕಾಂಗ್ರೆಸ್ ಅವಮಾನದಿಂದ ನಡೆಸಿಕೊಂಡಿದೆ. ಅದಕ್ಕೆಲ್ಲಾ ನಾನೇ ಸಾಕ್ಷಿ. ಅವಮಾನ ಆಗಿದ್ದರಿಂದ ಚುನಾವಣೆಗೆ ನಿಲ್ಲಬಾರದು ಎಂದು 2018ರಲ್ಲಿ ಬಿ ಫಾರಂ ಎಸೆದಿದ್ದರು. ಅಂತಹ ಸ್ವಾಭಿಮಾನ ಅಂಬರೀಶ್ ಅವರಿಗೆ ಇತ್ತು ಎಂದು ನುಡಿದರು.
ಕಳೆದ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಅವರ ಗೆಲುವಿಗೆ ಸಹಕರಿಸಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.