ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಧರಣಿಗೆ ಡೊಳ್ಳು ಕುಣಿತ ಕಲಾವಿದರ ತಂಡ, ಮುಸ್ಲಿಂ ಸಮುದಾಯ ಬಾಂಧವರು ಶುಕ್ರವಾರ ಬೆಂಬಲ ಸೂಚಿಸಿದರು.
ಮಂಡ್ಯ ನಗರದ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಮುಸ್ಲಿಂ ಸಮುದಾಯದ ಜನತೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಮುಗಿಸಿ ಕಾವೇರಿ ಹೋರಾಟದಲ್ಲಿ ಭಾಗವಹಿಸಿದರು. ಮಂಡ್ಯ ನಗರದ ವಿವಿಧ ಮಸೀದಿಗಳ ಮುಖ್ಯಸ್ಥರ ನೇತ್ರತ್ವದಲ್ಲಿ ಕಾವೇರಿ ಹೋರಾಟದ ಧರಣಿ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ಕಾವೇರಿ ನಮ್ಮವಳು ಎಂದು ಘೋಷಣೆ ಕೂಗುವ ಮೂಲಕ ಹೋರಾಟಕ್ಕೆ ನವ ಚೈತನ್ಯ ತುಂಬಿದರು.
ಕಾರಸವಾಡಿ ಗ್ರಾಮದ ವಿನಾಯಕ ಯುವಕರ ಕಲಾ ಬಳಗದವರು ಭಾಗಿಯಾಗಿ ಡೊಳ್ಳು ಕುಣಿತ ಪ್ರದರ್ಶಿಸಿ ಕಾವೇರಿ ಹೋರಾಟ ಬೆಂಬಲಿಸಿದರು. ಧರಣಿ ಸ್ಥಳದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಡೊಳ್ಳು ಕುಣಿತ ನಡೆಸಿ ಹೋರಾಟಕ್ಕೆ ಸಾಂಸ್ಕೃತಿಕ ಮೆರಗು ನೀಡಿದರು. ಕಲಾತಂಡದ ಮುಖ್ಯಸ್ಥ ಕೆ ಪಿ ಸ್ವಾಮಿ ನೇತೃತ್ವ ವಹಿಸಿದ್ದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿದ ಮುಸ್ಲಿಂರು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಹೌಸಿಂಗ್ ಬೋರ್ಡ್ ಮಸೀದಿ ಮುಖ್ಯಸ್ಥ ಮಹಮದ್ ಹುಸೇನ್ ಮಾತನಾಡಿ, ನಾವು ಹುಟ್ಟಿ ಬೆಳೆದದ್ದು ಮಂಡ್ಯದ ನೆಲದಲ್ಲೇ. ದಿನನಿತ್ಯದ ಬದುಕಿಗೆ ಕಾವೇರಿ ನೀರು ಆಶ್ರಯಿಸಿದ್ದೇವೆ, ನಮ್ಮ ಬದುಕು ರೈತರನ್ನ ಅವಲಂಬಿಸಿದೆ, ಕೃಷಿಗೆ ಪೂರಕ ವ್ಯವಹಾರ ನಮ್ಮದು, ಕಾವೇರಿ ನೀರು ಇಲ್ಲದೆ ನಮ್ಮಗಳ ಬದುಕು ಧಕ್ಕೆ ತರಲಿದೆ, ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು, ಹಾವೇರಿ ವಿಚಾರದಲ್ಲಿ ನಿರಂತರ ಹೋರಾಟ ಮಾಡಲು ಸಿದ್ದರಿದ್ದೇವೆ, ಪ್ರಾಣ ಇರುವವರೆಗೂ ಹೋರಾಡುತ್ತೇವೆ ಎಂದು ಹೇಳಿದರು.
ಧರಣಿಯಲ್ಲಿ ಮುಖಂಡರಾದ ಸರ್ದಾರ್, ಫಯಾಜ್ ಅಹಮದ್, ದಾವೂದ್, ನಜೀಬ್, ಫಯಾಜ್, ಸಾದತ್ ಅಲಿ ಹಾಗೂ ಯಾಸಿನ್ ಪಾಷಾ ನೇತೃತ್ವ ವಹಿಸಿದ್ದರು.