ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ನಾಲ್ಕನೇ ದಿನದ ಕಾಲಿಟ್ಟಿದ್ದು, ಭಾನುವಾರ ವಿವಿಧ ಕನ್ನಡ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿದರು.
ಬೆಂಗಳೂರಿನ ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನ ಸೈನ್ಯ, ಕರವೇ ಗಜ ಸೇನೆ, ಕನ್ನಡ ರಕ್ಷಣಾ ಸೇನೆ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಕ್ ಮೂಲಕ ಆಗಮಿಸಿ ಹೋರಾಟಕ್ಕೆ ಕೈ ಜೋಡಿಸಿದರು.
ಕನ್ನಡ ಚಿತ್ರರಂಗದ ನಟ ನಟಿಯರು ಕಾವೇರಿ ಹೋರಾಟದಲ್ಲಿ ಭಾಗಿಯಾಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ತಕ್ಷಣ ಕನ್ನಡ ಚಿತ್ರರಂಗ ಪ್ರಮುಖರು ಹೋರಾಟಕ್ಕಿಳಿಯಬೇಕೆಂದು ಒತ್ತಡ ಹಾಕಿದರು.
ಸರ್ವೋಚ್ಚ ನ್ಯಾಯಾಲಯಕ್ಕೆ ಕಾವೇರಿ ಕಣಿವೆ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಕರ್ನಾಟಕ ಸರ್ಕಾರ ಮುಂದಾಗಬೇಕು, ಸಂಕಷ್ಟ ಸೂತ್ರ ಪಾಲನೆ ಬಗ್ಗೆ ತಿಳಿಸಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಪರ ಸಂಘಟನೆ ಮುಖಂಡರಾದ ಯೋಗೇಶ್ ಗೌಡ, ಕನ್ನಡ ಪ್ರಕಾಶ್, ಕರವೇ ಯುವ ಅಧ್ಯಕ್ಷ ಸುನೀಲ್, ಹರೀಶ್, ಎಂ. ಬಿ. ನಾಗಣ್ಣಗೌಡ ನೇತೃತ್ವ ವಹಿಸಿದ್ದರು. ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರಾದ ಸುನಂದಾ ಜಯರಾಂ, ಬೇಕ್ರಿ ರಮೇಶ್, ಕೆ ಬೋರಯ್ಯ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್ ಭಾಗವಹಿಸಿದ್ದರು.