ರಾಜ್ಯದಲ್ಲಿರುವ ಮೂರು ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಚ್ಚರಿಯ ಉತ್ತರ ನೀಡಲಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಎಪಿ ತಾಲೂಕು ಸಂಚಾಲಕ ಸೊಳ್ಳೆಪುರ ಶಿವರಾಂ ಚಂದ್ರಶೇಖರ್ ಅವರಿಂದ ಅಭಿನಂದನೆ ಸ್ವೀಕರಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಮೂರು ಪಕ್ಷಗಳಿಗೆ ಬೇರೆ ಯಾವುದೇ ಪಕ್ಷ ಸವಾಲು ಹಾಕಲು ಸಾಧ್ಯವಿಲ್ಲ ಎಂದು ತಿಳಿದುಕೊಂಡವರಿಗೆ ಈ ಬಾರಿ ಜಿ.ಪಂ.,ತಾ.ಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ರೀತಿಯ ಉತ್ತರ ಸಿಗಲಿದೆ ಎಂದರು
ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದಿಂದ ನಿರೀಕ್ಷೆಗೂ ಮೀರಿದ ಅಭ್ಯರ್ಥಿಗಳು ಕಣಕ್ಕಿಳಿದು ಗೆಲುವು ಸಾಧಿಸುವುದರ ಮೂಲಕ ಮೂರು ಪಕ್ಷಗಳಿಗೆ ಅಚ್ಚರಿ ಮೂಡಿಸಲಿದ್ದಾರೆ ಎಂದರು.
ಈಗಾಗಲೇ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಲ್ಲಿರುವ ಮಾಜಿ ಶಾಸಕರು, ಹಾಲಿ ಶಾಸಕರು ಬೇಸರದಲ್ಲಿದ್ದು ಅಮ್ ಆದ್ಮಿ ಪಕ್ಷಕ್ಕೆ ಸೇರುವ ಇಂಗಿತವನ್ನು ಮಾಡಿ, ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ಹತ್ತಿರದಲ್ಲಿ ಅವರೆಲ್ಲ ಆಮ್ ಆದ್ಮಿ ಪಕ್ಷ ಸೇರಲಿದ್ದು,ಪಕ್ಷ ಬಲಿಷ್ಠ ವಾಗುತ್ತದೆ ಎಂದರು.
ಬಿಜೆಪಿಯ ವಿರುದ್ಧ ಜನತೆ ಬೇಸರ
ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ ಜನರು ಪಕ್ಷಗಳ ಸುಳ್ಳು ಭರವಸೆಗಳನ್ನು ನೋಡಿ ಬೇಸತ್ತಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲದ ಮುಖ್ಯಮಂತ್ರಿ.ಅವರು ನೇರವಾಗಿ ಜನರಿಗೆ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಶಾಲಾ ಮಕ್ಕಳಿಗೆ ಶೂ ಕೊಡುವ ವಿಚಾರದಲ್ಲಿ ಶಿಕ್ಷಣ ಸಚಿವರು ಹಗುರ ಹೇಳಿಕೆ ವಿರುದ್ಧ ಮಾತನಾಡದೆ ಅವರ ಪರವಾಗಿ ಮಾತನಾಡುತ್ತಿರುವುದು. ಕುವೆಂಪು ವಿಚಾರದಲ್ಲಿ, ಕೆಂಪೇಗೌಡ ವಿಚಾರದಲ್ಲಿ ಬಿಜೆಪಿಯಲ್ಲಿರುವ ಸಿಟಿ ರವಿಯಾಗಲಿ, ಅಶೋಕ್ ಆಗಲಿ, ಅಶ್ವಥ್ ನಾರಾಯಣ್ ಅವರಾಗಲಿ ಮಾತನಾಡದೆ ಇರುವುದು ನಿಜಕ್ಕೂ ಬೇಸರದ ವಿಚಾರ ಎಂದರು.
ಈ ಸರ್ಕಾರ ಮೋದಿ,ಅಮಿತ್ ಷಾ,ಸಂಘ ಪರಿವಾರದ ಕೈಗೊಂಬೆಯ ಸರ್ಕಾರವಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇಂಥ ಸರ್ಕಾರ ಇಡಿ,ಎಸಿಬಿ ಇಟ್ಟುಕೊಂಡು ಬೇರೆಯವರನ್ನ ಎದುರಿಸುವ ಬದಲು ತಮ್ಮ ಪಕ್ಷದ 40 ಪರ್ಸೆಂಟ್ ಕಮಿಷನ್ ಗಿರಾಕಿ ಹಾಗೂ ಹಣ ಎಣಿಸುವ ಮಿಷನ್ ಜೊತೆ ಸಿಕ್ಕಿಹಾಕಿಕೊಂಡ ಈಶ್ವರಪ್ಪ ಅವರು ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಿತ್ತಲ್ಲವೇ? ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ದರ್ಶನ್, ತಾಲೂಕು ಉಸ್ತುವಾರಿ ಶಿವರಾಮ್, ವಕೀಲ ಮಾದೇಗೌಡ, ನಾರಾಯಣ ಗೌಡ,ಚಿಕ್ಕ ಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.