ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂದು ಸ್ವಚ್ಚತಾ ಹೀ ಸೇವಾ ಆಂದೋಲನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀದಿಗೆ ಇಳಿದು ಸ್ವಚ್ಛ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಿ ಎನ್ನುವ ಉದ್ದೇಶದೊಂದಿಗೆ ಶ್ರಮದಾನ ಮಾಡುತ್ತಿದ್ದೇವೆ ಎಂದರು.
ನಮ್ಮ ಮನೆ, ಕಛೇರಿ ಸುತ್ತಮುತ್ತ ಪರಿಸರವನ್ನ ಸ್ವಚ್ಚವಾಗಿಟ್ಟುಕೊಳ್ಳಬೇಕು. ಸ್ವಚ್ಚತೆ ಎನ್ನುವುದು ಮನಸ್ಸಿಗೆ ಸಂಬಂಧ ಪಟ್ಟ ವಿಷಯ. ಮನಸ್ಸು ಸ್ವಚ್ಚವಾಗಿದ್ದರೆ, ನಮ್ಮ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬಹುದು. ಮನಸ್ಸು ಹಾಗೂ ಪರಿಸರ ಸ್ವಚ್ಚವಾಗಿದ್ದರೆ ದೈಹಿಕವಾಗಿ ಆರೋಗ್ಯವಾಗಿರಬಹುದು ಎಂದರು.
ಜಿಲ್ಲೆಯಲ್ಲಿ 4 ಕಡೆ ಸರ್ಕಾರಿ ಕಚೇರಿ ಸಿಬ್ಬಂದಿಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರದ ಪ್ರಮುಖ ಪಾರ್ಕ್, ರಸ್ತೆ ಬದಿ, ಕಚೇರಿ ಸೇರಿದಂತೆ ಸ್ವಚ್ಚತಾ ಶ್ರಮದಾನ ನಡೆಯುತ್ತಿದೆ ಎಂದರು.
ಮಂಡ್ಯ ನಗರಸಭೆ ಪೌರಕಾರ್ಮಿಕರು ಕೂಡಾ ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ,ನಗರಸಭೆ ಆಯುಕ್ತ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ: ಸೀತಾ ಲಕ್ಷ್ಮಿ, ವಾರ್ತಾಧಿಕಾರಿ ಎಸ್. ಹೆಚ್. ನಿರ್ಮಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.