ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಗ್ಗಹಳ್ಳಿ ವೆಂಕಟೇಶ್ ಅವರಿಗೆ ಮತದಾರರು ಹಾಗೂ ಬೆಂಬಲಿಗರೇ ಚುನಾವಣಾ ಖರ್ಚಿಗಾಗಿ ಧನ ಸಹಾಯ ಮಾಡುತ್ತಿರುವ ಘಟನೆ ಕ್ಷೇತ್ರದ ವಿವಿಧೆಡೆ ಕಂಡು ಬಂದಿವೆ.
ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಪಕ್ಷವು ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದು ಅವರ ಚುನಾವಣೆ ವೆಚ್ಚಕ್ಕಾಗಿ ಮತದಾರ ಹಣ ನೀಡುತ್ತಿರುವುದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದಿದೆ.
ಚೀರನಹಳ್ಳಿ ಗ್ರಾಮದದಲ್ಲಿ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಹಣವಿಲ್ಲ ಎಂದು ಹೆದರಬೇಡಿ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ನಾವೇ ಹಣ ಕೊಡುತ್ತೇವೆಂದು ಮುಂದೆ ಬಂದು ಹಣ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಕ್ರಮ ಹಣ ಹಂಚಿ ಚುನಾವಣಾ ವ್ಯವಸ್ಥೆಯನ್ನು ತಮ್ಮತ್ತ ಸೆಳೆಯಲು ಹೊಂಚು ಹಾಕುತ್ತಿದ್ದು, ಇದನ್ನು ತಡೆಗಟ್ಟಲು ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೂರು ಪಕ್ಷಗಳ ಅಭ್ಯರ್ಥಿಗಳು ಬೇನಾಮಿ ಹಣ ಹಂಚಿ ಚುನಾವಣೆಯಲ್ಲಿ ಜಯಗಳಿಸಲು ಪೈಪೋಟಿಗಿಳಿದಿದ್ದಾರೆ. ಇವರ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿರುವ ನಾನು ಹಣ ಬಲವೋ ಜನ ಬಲವೋ ಎಂಬ ಘೋಷ ವಾಕ್ಯದಂತೆ ‘ವೋಟು ನೀಡಿ – ನೋಟು ಕೊಡಿ’ ಎಂದು ಮತದಾರನ ಮನೆಯಂಗಳಕ್ಕೆ ತೆರಳುತ್ತಿದ್ದು, ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿದ್ದರೂ ನಾನು ಕಣದಲ್ಲುಳಿಯುವ ಮೂಲಕ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿದ್ದೇನೆ, ನನ್ನ ವಿರುದ್ಧ ಸುಳ್ಳು ಪ್ರಚಾರಕ್ಕೆ ಮುಂದಾಗುವವರು ರಣ ಹೇಡಿಗಳು. ಅವರಿಗೆ ಕ್ಷೇತ್ರದ ಜನ ಬುದ್ದಿ ಕಲಿಸಲಿದ್ದಾರೆಂದರು.
ಕ್ಷೇತ್ರದ ಮತದಾರ ಬಂಧುಗಳು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ ವಿಶ್ವಾಸಕ್ಕೆ ದ್ರೋಹ ಬಗೆದು ಚುನಾಯಿತ ಪಕ್ಷಕ್ಕೆ ಅನ್ಯಾಯವೆಸಗಿ ಹಣಕ್ಕೆ ಪವಿತ್ರ ಮತವನ್ನು ಮಾರಿಕೊಂಡು, ಕ್ಷೇತ್ರಕ್ಕೆ ಕಳಂಕ ತಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪ್ರಜಾಪ್ರಭುತ್ವಕ್ಕೆ ಮಾರಕವಾದ ವ್ಯಕ್ತಿ ಎಂದು ತಗ್ಗಹಳ್ಳಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ರವೀಂದ್ರ ಶ್ರೀಕಂಠಯ ದುರಂಹಕಾರಿಯಾಗಿದ್ದು ಕಾರ್ಯಕರ್ತರ ಕಷ್ಟ ಕೇಳುತ್ತಿಲ್ಲ, ಕಾರ್ಯಕರ್ತರ ಕೈಗೂ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮರೆತು ರಾಜಕಾರಣ ಮಾಡುತ್ತಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿ ಎಸ್.ಸಚ್ಚಿದಾನಂದ ಮತ್ತು ಬೆಂಬಲಿಗರು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ಮಾನ್ಯ ಮತದಾರರು ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.