ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ‘ಬಿಜೆಪಿ ಏಜೆಂಟ್’ ಎಂದು ಆರ್ಜೆಡಿ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಕರೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ, “ಬಿಜೆಪಿ ಚುನಾವಣೆಯಲ್ಲಿ ಸೋಲುತ್ತಿದೆ. ಈಗ ಬಿಜೆಪಿ ಪರವಾಗಿ ವಾತಾವರಣ ಸೃಷ್ಟಿ ಮಾಡಲೆಂದು ಮೂರ್ನಾಲ್ಕು ಸುತ್ತಿನ ಮತದಾನದ ನಂತರ ಕಿಶೋರ್ ಅವರನ್ನು ಬಿಜೆಪಿ ಕರೆಸಿಕೊಂಡಿದೆ” ಎಂದು ಆರೋಪಿಸಿದರು.
“ನನ್ನ ಚಿಕ್ಕಪ್ಪ (ನಿತೀಶ್ ಕುಮಾರ್) ಕೂಡ ಅಮಿತ್ ಶಾ ಆದೇಶದ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷನಾಗಿ ನೇಮಕ ಮಾಡಿರುವುದಾಗಿ ಹೇಳಿದ್ದರು. ಈವರೆಗೂ ಶಾ ಅಥವಾ ಪ್ರಶಾಂತ್ ಕಿಶೋರ್ ಈ ಆರೋಪವನ್ನು ಅಲ್ಲಗಳೆದಿಲ್ಲ. ಪ್ರಶಾಂತ್ ಕಿಶೋರ್ ಮೊದಲಿನಿಂದಲೂ ಬಿಜೆಪಿಯಲ್ಲೇ ಇದ್ದಾರೆ. ಅವರು ಯಾವ ಪಕ್ಷಕ್ಕೆ ಸೇರಿದರೂ ಅದು ನಾಶವಾಗುತ್ತದೆ” ಎಂದು ಹೇಳಿದ್ದಾರೆ.
ಕಿಶೋರ್ 2019ರ ಲೋಕಸಭಾ ಚುನಾವಣೆಗೂ ಕೆಲವು ತಿಂಗಳುಗಳ ಮುನ್ನ ಜೆಡಿಯು ಸೇರ್ಪಡೆಯಾಗಿದ್ದರು. ಆದರೆ 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಜೆಡಿಯು ನಿಲುವನ್ನು ಟೀಕಿಸಿದ ಪ್ರಶಾಂತ್ರನ್ನು ಜೆಡಿಯು ಪಕ್ಷದಿಂದ ತೆಗೆದುಹಾಕಿದೆ.
“ಪ್ರಶಾಂತ್ ಕಿಶೋರ್ಗೆ ಎಲ್ಲಿಂದ ಹಣ ಬರುತ್ತಿದೆಯೋ ಗೊತ್ತಿಲ್ಲ. ಪ್ರತಿ ವರ್ಷ ಬೇರೆ ಬೇರೆ ಜನರೊಂದಿಗೆ ಕೆಲಸ ಮಾಡುತ್ತಾರೆ. ನಿಮ್ಮ ಡೇಟಾವನ್ನು ಪಡೆದು ಅದನ್ನು ಇನ್ನೊಬ್ಬರಿಗೆ ನೀಡುತ್ತಾರೆ. ಪ್ರಶಾಂತ್ ಕೇವಲ ಬಿಜೆಪಿ ಏಜೆಂಟ್ ಅಲ್ಲ, ಬಿಜೆಪಿ ಮನಸ್ಥಿತಿಯನ್ನೂ ಹೊಂದಿದ್ದಾರೆ, ಬಿಜೆಪಿ ಸಿದ್ಧಾಂತ ಅನುಸರಿಸುತ್ತಾರೆ. ಪ್ರಶಾಂತ್ರ ಈ ತಂತ್ರದ ಭಾಗವಾಗಿ ಬಿಜೆಪಿ ಅವರಿಗೆ ಹಣ ನೀಡುತ್ತಿದೆ” ಎಂದು ತೇಜಸ್ವಿ ಆರೋಪಿಸಿದ್ದಾರೆ.
ಬಿಜೆಪಿಯು ಪ್ರಶಾಂತ್ ಕಿಶೋರ್ ಅವರನ್ನು ತನ್ನ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದೆ ಎಂಬ ನಕಲಿ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಆರ್ಜೆಡಿ ನಾಯಕ ಪ್ರಶಾಂತ್ ಕಿಶೋರ್ ವಿರುದ್ಧ ಈ ಆರೋಪ ಮಾಡಿದ್ದಾರೆ.
ಇನ್ನು ಇತ್ತೀಚೆಗೆ ಸಂದರ್ಶನದ ವೇಳೆ ಪತ್ರಕರ್ತ ಕರಣ್ ಥಾಪರ್ ಮತ್ತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಂದರ್ಶನದ ವೇಳೆ ಕರಣ್ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಪ್ರಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಣ್ ಥಾಪರ್ ಅವರು ಪ್ರಶಾಂತ್ ಕಿಶೋರ್ ಬೆವರಿಳಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.