ನಾಟಕ ಎಂದರೆ ಬರೀ ಕಲೆಯಲ್ಲ. ಅದು ಜೀವನದ ಪಾಠ ಕಲಿಸುತ್ತದೆ ಎಂದು ಬಿಜೆಪಿ ಮುಖಂಡ ಇಂದ್ರೇಶ್ ತಿಳಿಸಿದರು.
ಮಂಡ್ಯ ನಗರದ ಕಲಾಮಂದಿರದಲ್ಲಿ ಶ್ರೀ ಭೈರವೇಶ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಹಾಸ್ಯಪ್ರದಾನ ‘ಚನ್ನಪ್ಪ ಚನ್ನೇಗೌಡ’ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ.ಇಂದು ಮತ್ತಷ್ಟು ಕಲಾ ಪೋಷಕರು ಮತ್ತು ಕಲಾರಾಧಕರು ಹೆಚ್ಚಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಲೆಗೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲ ಕಲಾವಿದರು ನಿಲ್ಲಬೇಕು. ಪ್ರತಿಯೊಬ್ಬರೂ ಪೌರಾಣಿಕ ಸೇರಿದಂತೆ ಸಾಮಾಜಿಕ ನಾಟಕಗಳಿಗೂ ಪ್ರಾಧಾನ್ಯತೆ ನೀಡಬೇಕು. ಜೊತೆಗೆ ಹಾಸ್ಯ ನಾಟಕಗಳು ಸಹ ಮನಸ್ಸನ್ನು ಮುದಗೊಳಿಸುತ್ತವೆ. ಹಿರಿಯ ಕಲಾವಿದರನ್ನು ಗೌರವಿಸುವುದು ಒಂದು ಉತ್ತಮವಾದ ಕೆಲಸವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯ ಕಸಪಾ ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಮಾತನಾಡಿ, ಸರ್ಕಾರವು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಜನಪ್ರತಿನಿಧಿಗಳು ಹಾಗೂ ಕಲಾವಿದರ ಜೊತೆ ಚರ್ಚೆ ನಡೆಸಬೇಕು. ಜಿಲ್ಲೆಯ ಕಲಾಮಂದಿರದಲ್ಲಿ ನಡೆಯುವ ನಾಟಕಗಳಿಗೆ 50 ಸಾವಿರ ರೂಪಾಯಿ ಅನುದಾನ ನೀಡಬೇಕೆಂದು ಎಲ್ಲರೂ ಸೇರಿ ಒತ್ತಾಯಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ರೇವಣ್ಣ, ಡಿ.ವೆಂಕಟರಮಣಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸ್ತೂರಿ ಕನ್ನಡ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಿ.ಸಿ.ಉಮಾಶಂಕರ್, ಹಿರಿಯ ರಂಗಭೂಮಿ ಕಲಾವಿದ ಪಾಪಣ್ಣ, ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ಮುಖಂಡರಾದ ಶಿವಣ್ಣ, ತಿಮ್ಮೇಗೌಡ, ಸೋಮಣ್ಣ, ಬಸವರಾಜು, ರೇವಣ್ಣ, ಜಯರಾಮ್, ಚಿಕ್ಕನಾಗೇಗೌಡ, ಶಂಕರ್, ರೈಸ್ಮಿಲ್ ಬಸವರಾಜು ಭಾಗವಹಿಸಿದ್ದರು.