ಪ್ರಸ್ತುತ ದಿನಗಳಲ್ಲಿ ಮಗು ಒಂದು ಸರಕಾಗಿದ್ದು, ಅದರ ಮೇಲೆ ನಾವು ಬಂಡವಾಳ ಹೂಡುತ್ತಿರುವುದು ವಿಷಾದದ ಸಂಗತಿ ಎಂದು ಚಾಮರಾಜನಗರ ದೀನ ಬಂಧು ಸಂಸ್ಥೆಯ ಮುಖ್ಯಸ್ಥ ಡಾ. ಜಿ.ಎಸ್. ಜಯದೇವ್ ಬೇಸರ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ. ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಚೇತನ ಬೋಧಕರ ಸಾಮರ್ಥ್ಯಾಭಿವೃದ್ಧಿ ಮತ್ತು ಕೌಶಲ್ಯಗಳ ಕುರಿತು ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯು ಶಿಶು ಕೇಂದ್ರದ ಬದಲು ಕೌಶಲ್ಯ ಕೇಂದ್ರ ಕಾರ್ಖಾನೆಯಾಗಿ ಮಾರ್ಪಡಾಗುತ್ತಿರುವುದು ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತ ಪಡಿಸಿದರು. ಕಲಿಕೆಯ ಜೊತೆಗೆ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ತಿಳಿಸಬೇಕು. ಆಗ ಮಾತ್ರ ಮನುಷ್ಯನ ಜೀವನಕ್ಕೆ ಒಂದು ಅರ್ಥ ಬರುತ್ತೆ ಎಂದರು.
ಮಕ್ಕಳಿಗೆ ಅಧ್ಯಾಪಕರ ಮತ್ತು ಪೋಷಕರ ಸಂಬಂಧ ಬಹಳ ಪ್ರಮುಖವಾಗಿದ್ದು, ಶಿಕ್ಷಣ ಪರಿಮಿತಿಯ ಹೊರಗಡೆಯಿಂದ ಬಂದು ಬೋಧನಾ ಕೌಶಲ್ಯಾಭಿವೃದ್ಧಿಯನ್ನು ವೃದ್ಧಿಸಿಕೊಂಡು ಮೌಲ್ಯಗಳ ಪ್ರವೃತ್ತಿಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದರು.
ಮಕ್ಕಳಲ್ಲಿ ಸೃಜನಶೀಲತೆಯ ಮೌಲ್ಯವನ್ನು ತುಂಬುವ ಶಿಕ್ಷಣ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್.ಆರ್. ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಹಲವು ಶಿಕ್ಷಣ ಸಂಸ್ಥೆಗಳು ಇಂತಹ ಕಾರ್ಯಾಗಾರ ಆಯೋಜಿಸಿ, ವ್ಯಕ್ತಿತ್ವ ವಿಕಸನಗೊಳ್ಳಲು ಕಾರಣವಾಗುತ್ತಿವೆ ಎಂದರು. ಶಿಕ್ಷಕರು ಕೇವಲ ಪಾಠ ಪ್ರವಚನಗಳಿಗಷ್ಟೇ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಸಾಂಸ್ಕೃತಿಕ, ಕ್ರೀಡೆ, ಇನ್ನಿತರೆ ಚಟುವಟಿಕೆಗಳತ್ತ ಹೆಚ್ಚು ಗಮನಹರಿಸುವಂತೆ ಮಾಡಿ, ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈಯಲು ಅವರನ್ನು ಪ್ರೇರೇಪಿಸಬೇಕೆಂದರು.
ಆರ್.ಕೆ.ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಅಧ್ಯಕ್ಣತೆ ವಹಿಸಿದ್ದರು.
ಅಜೀಂ ಪ್ರೇಮ್ ಜೀ ಫೌಂಡೇಶನ್ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಉಮಾಶಂಕರ್ ಪೆರಿಯೋಡಿ, ಹಿರಿಯ ವಿಜ್ಞಾನ ಡಾ.ಬಿ.ಎಸ್. ಸೋಮಶೇಖರ್, ರಂಗಾಯಣ ನಿರ್ದೇಶಕ ಎಸ್.ರಾಮನಾಥ, ಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ತುಕಾರಾಮ್, ಸದಸ್ಯ ಎಚ್.ಎನ್. ಶಿವಣ್ಣಗೌಡ, ಕ್ಷೇತ್ರ ಪರಿಣಿತ ಡಾ.ರವಿಕುಮಾರ್, ಆಡಳಿತಾಧಿಕಾರಿ ಡಾ.ಎಂ.ಸಿ.ಸತೀಶ್ ಬಾಬು, ಶೈಕ್ಷಣಿಕ ಸಂಯೋಜಕ ಜಿ.ಎಸ್. ಸುರೇಶ್ ಕುಮಾರ್ ಹಾಗೂ ಇತರರು ಇದ್ದರು