ರಾಜ್ಯ ಕಂಡಂತಹ ಒಬ್ಬ ಭಾವನಾತ್ಮಕ ಜೀವಿ ಹಾಗೂ ಬಡಜನತೆಯ ಉದ್ಧಾರ ಮಾಡುವ ನಾಯಕ ಯಾರಾದರೂ ಇದ್ದರೆ, ಅದು ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣ ಹೇಳಿದರು.
ಮಂಡ್ಯ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಸಮೀಪವಿರುವ ಶ್ರೀಸುಬ್ರಹ್ಮಣ್ಯಸ್ವಾಮಿ ಕಟ್ಟೆ ಬಳಿ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘ ಆಯೋಜಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ಕೇಕ್ ಕತ್ತರಿಸಿ ಸಿಹಿ ವಿತರಿಸಿ ಅವರು ಮಾತನಾಡಿದರು.
ಮುಂದಿನ 2023ಕ್ಕೆ ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಪಂಚರತ್ನ ಯೋಜನೆಗಳು ಸಫಲತೆ ಕಾಣಲು ಜನತೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಲಿ, ಅವರ 64ನೇ ಜನ್ಮ ದಿನದಂದು ಎಲ್ಲರೂ ಪಕ್ಷ ಭೇದ ಮರೆತು ವಿವಿಧ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯದ ಜನರು, ಪಕ್ಷದ ಮುಖಂಡರ ತಮ್ಮ ಕಷ್ಟಗಳಿಗೆ ಸ್ಪಂದಿಸುವ ಕುಮಾರಸ್ವಾಮಿ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅವರ ಅಭಿಮಾನಿ ಸಂಘದ ಅಧ್ಯಕ್ಷನಾಗಿ ನಾನು ಕೂಡ ಸರಳವಾಗಿ ಸಾರ್ವಜನಿಕರೊಂದಿಗೆ ಆಚರಿಸಿದ್ದೇನೆ. ಕುಮಾರಸ್ವಾಮಿ ಅವರಿಗೆ ದೇವರು ಆಯುಸ್ಸು, ಆರೋಗ್ಯ, ರಾಜಕೀಯ ಶಕ್ತಿ ನೀಡಲಿ, ಬಹುಮತದೊಂದಿಗೆ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ನಾನೂ ಕೂಡ ಆಕಾಂಕ್ಷಿ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಿ.ಫಾರಂ ಕೇಳುತ್ತಿರುವವರಲ್ಲಿ ನಾನು ಹಿರಿಯ. ನಾನೂ ಕೂಡ ಜೆಡಿಎಸ್ ಬಿ.ಫಾರಂ ಆಕಾಂಕ್ಷಿಯಾಗಿದೇನೆ. ಜೆಡಿಎಸ್ ವರಿಷ್ಠರು ಬಿ.ಫಾರಂ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರಾದ ಕೊತ್ತತ್ತಿ ಮಹದೇವು, ದೇವೇಗೌಡ, ರವಿಕುಮಾರ್, ಗಂಗಾಧರ್, ಆರಾಧ್ಯ ಸೇರಿದಂತೆ ಮತ್ತಿತರರಿದ್ದರು.