ಹತ್ತಾರು ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಅಂತಿಮವಾಗಿ ಜಯ ಲಭಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಳಮೀಸಲಾತಿಗೆ ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಸಾಂವಿಧಾನಿಕ ಪೀಠ ಸಮ್ಮತಿ ನೀಡಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನ್ಯಾ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿಯೇ ತೀರಾ ಹಿಂದುಳಿದಿರುವ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಪು ನೀಡಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಜಾರಿಗೆ ತರಬಹುದು ಎಂದು ತಿಳಿಸಿದೆ.
ಏಳು ನ್ಯಾಯಮೂರ್ತಿಗಳೆಲ್ಲರೂ ಒಳಮೀಸಲಾತಿಯ ಬಗ್ಗೆ ತಮ್ಮ ತೀರ್ಪನ್ನು ನೀಡಿದ್ದಾರೆ. ಒಬ್ಬರನ್ನು ಹೊರತುಪಡಿಸಿ (ನ್ಯಾ. ಬೇಲಾ ತ್ರಿವೇದಿ) ಉಳಿದ ಆರು ಮಂದಿಯ ತೀರ್ಪುಗಳು ಪರಿಶಿಷ್ಟ ಜಾತಿ, ಪಂಗಡಗಳ ಉಪವರ್ಗೀರಣಕ್ಕೆ ಹಾಗೂ ಆ ಮೂಲಕ ಒಳಮೀಸಲಾತಿಯ ಪರವಾಗಿದ್ದರು. ಹಾಗಾಗಿ, 6:1 ಅನುಪಾತದಡಿ, ಉಪವರ್ಗೀಕರಣ ಆಧಾರಿತ ಮೀಸಲಾತಿಗೆ ನ್ಯಾಯಪೀಠ ಅಸ್ತು ಹೇಳಿದಂತಾಗಿದೆ.