ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣೂರು ಸಮೀಪ ಮ್ಯಾಗ್ನಸ್ ರೇಡಿಯಂ ಪ್ಲೇವುಡ್ ಪ್ಯಾಕ್ಟರಿಯಲ್ಲಿ ಕಳೆದ ಡಿ.20ರಂದು ರಾತ್ರಿ ವೇಳೆಯಲ್ಲಿ ಸುಮಾರು ₹ 40 ಲಕ್ಷ ಮೌಲ್ಯದ ಮಿಷನರಿಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿರುವ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನ ಸಚಿನ್, ಈತನ ತಂದೆ ಚಕ್ರಪಾಣಿ, ಬೆಂಗಳೂರು ಪೀಣ್ಯದ ನಾಗರಾಜ ಆಲಿಯಾಸ್ ರಾಜ ಹಾಗೂ ಚನ್ನಪಟ್ಟಣ ಸಮೀಪದ ಬೇಗೂರಿನ ಸಿದ್ದರಾಜು ಬಂಧಿತ ಆರೋಪಿಗಳು.
ಎಂ. ನೌಷಾದ್ ಎಂಬುವವರಿಗ ಸೇರಿದ್ದ ಪ್ಲೇವುಡ್ ಪ್ಯಾಕ್ಟರಿಯಲ್ಲಿ ಕಳವು ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ, ಪ್ಯಾಕ್ಟರಿಯ ಮಿಷನರಿಗಳನ್ನು ಬೆಂಗಳೂರು, ಹಾಸನ ಹಾಗೂ ಆಲೂರುನಲ್ಲಿ ಪತ್ತೆಮಾಡಿ, ₹40 ಲಕ್ಷದ ಮೌಲ್ಯದ ಮಿಷನರಿಗಳು ಹಾಗೂ ಕೃತ್ಯಕ್ಕೆ ಬಳಸಿದ 2 ಕ್ಯಾಂಟರ್, 1 ಕಾರು ಹಾಗೂ ಗ್ಯಾಸ್ ಕಟ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿಗಳ ಪತ್ತೆಗೆ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷರ ಸಿ.ಇ. ತಿಮ್ಮಯ್ಯ, ಎಸ್.ಇ ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿ.ವೈ.ಎಸ್.ಪಿ. ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿ.ಎಸ್.ಐಗಳಾದ ರಾಮಸ್ವಾಮಿ, ಭೀಮಪ್ಪ ಬಾಣಸಿ, ಮತ್ತು ಸಿಬ್ಬಂದಿಗಳಾದ ಮಹೇಶ್, ರಾಜೇಂದ್ರ, ನಟರಾಜ ವಿಠಲ್, ಸುಬ್ರಮಣಿ, ಅರುಣ್, ವಾಸುದೇವ, ರವಿಕಿರಣ್, ಲೋಕೇಶ್ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ಮಿಷನರಿಗಳನ್ನು ವಶಕ್ಕೆ ಪಡೆದಿದೆ. ಈ ತಂಡದ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸಿಸಿದ್ದಾರೆ.