ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನೃತ್ಯ ಸ್ಪರ್ಧೆಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು, ಮಂಡ್ಯ ಜಿಲ್ಲೆಯ ಯುವಜನರು ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ರೆಬಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ನಡೆದ ರಾಜ್ಯಮಟ್ಟದ ರೆಬೆಲ್ ಕಪ್ ನೃತ್ಯ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಅವಧಿಯಲ್ಲಿ ಬೂದನೂರು ಉತ್ಸವ, ಕೆರಗೋಡು ಉತ್ಸವ ಮಾಡಿ ಯಶಸ್ವಿಯಾಗಿದ್ದೇವೆ.. ರೆಬೆಲ್ ಡ್ಯಾನ್ಸ್ ಗ್ರೂಪ್ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡಲಿ, ಸಂಸ್ಥೆಯ ಜೊತೆಗೆ ನಾನು ಇರುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರೆಬಲ್ ಡ್ಯಾನ್ಸ್ ಗ್ರೂಪ್ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದೆ. 14 ವರ್ಷಗಳ ನಂತರ ಮಂಡ್ಯದಲ್ಲಿ ರಾಜ್ಯಮಟ್ಟದ ನೃತ್ಯ ವೈಭವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಸಂತೋಷವಾದ ವಿಷಯವಾಗಿದೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 200 ಸ್ಪರ್ಧಿಗಳು ಭಾಗವಹಿಸಿ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ನಮ್ಮ ಜಿಲ್ಲೆಯ ಹಲವು ಚಿತ್ರರಂಗ, ನಾಟಕ, ರಂಗಭೂಮಿ, ಸಾಂಸ್ಕೃತಿಕ, ಶಿಕ್ಷಣ ಇಂತಹ ಹಲವಾರು ವಿಷಯಗಳಿಗೆ ಸಾಧನೆ ಮಾಡಿದ ಮಹಾನ್ ನಾಯಕರ ಪಟ್ಟಿಯೇ ನಮ್ಮಲ್ಲಿದೆ. ಇಂತಹ ಕಾರ್ಯಕ್ರಮಗಳು ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ನಡೆದು ಮಂಡ್ಯ ಜಿಲ್ಲೆಯ ಯುವಜನತೆಯ ಬದುಕು ಹಸನವಾಗಲು ನಾವೆಲ್ಲರೂ ಕೈಜೋಡಿಸೋಣ ಎಂದರು.
ವೇದಿಕೆಯಲ್ಲಿ ಸ್ವರ್ಣಟಿವಿಯ ಮುಖ್ಯಸ್ಥ ಶಂಭುಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷ ಹುಸ್ಕೂರು ಕೃಷ್ಣೇಗೌಡ, ಸಿಪಿಐ ನವೀನ್, ಬಿಜೆಪಿಯ ಯುವ ಮುಖಂಡ ಮಂಜುನಾಥ್, ಕದಲೂರು ವಿನಯ್, ಸಂಸ್ಥೆಯ ಅಧ್ಯಕ್ಷ ರಾಕಿ ಅರ್ಜುನ್, ಫಿಟ್ನೆಸ್ 11 ಸಂಸ್ಥೆಯ ಮುಖ್ಯಸ್ಥ ರೋಹಿತ್, ಶಿವು, ರಕ್ಷಿತ್, ಮನೋಜ್, ಭರತ್ ಸಿಂಗ್ ಇದ್ದರು.