ಮುಂಬರುವ ಶ್ರೀರಂಗಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಹಳ್ಳಿ ಹಳ್ಳಿಗೆ ತೆರಳಿ ಮತದಾರರಿಂದ ಅಭಿಪ್ರಾಯ ಪಡೆಯಲಾಗುವುದು ಎಂದು ರೈತ ಮುಖಂಡ ಕಿರಂಗೂರು ಪಾಪು (ಮೋಹನ್ ಕುಮಾರ್) ತಿಳಿಸಿದ್ದಾರೆ.
ಇಂದು ಜನ ಸಾಮಾನ್ಯರ ಆಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತೆ ರಾಜಕೀಯ ಪಕ್ಷಗಳ ಮುಖಂಡರು ಅಧಿಕಾರಕ್ಕೆ ಹಪಹಪಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತ ಸಂಘದ ಹೋರಾಟಗಳಲ್ಲೇ ಕ್ಷೇತ್ರದ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಿ ರೈತ ಸಂಘದಿಂದ ಕಣಕ್ಕಿಳಿಯುತ್ತಿದ್ದೇನೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರನ್ನು ಭೇಟಿ ಮಾಡಿ ಅನಿಸಿಕೆ, ಅಭಿಪ್ರಾಯ ಕೇಳಲು ಗೌರವಾನ್ವಿತ ಮತದಾರರ ಮುಂದೆ ಹಳ್ಳಿ ಹಳ್ಳಿಯಲ್ಲೂ ಪ್ರಯಾಣ ಮಾಡುತ್ತೇನೆ, ಮತದಾರರು ಸಲಹೆ, ಸಹಕಾರ ಕೊಟ್ಟರೆ ಮಾತ್ರ ರೈತಸಂಘದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಇಚ್ಛಿಸಿದ್ದೇನೆ, ಕ್ಷೇತ್ರದ ರಾಜಕಾರಣ ಸನ್ನಿವೇಶದಲ್ಲಿ ಹಣಬಲ, ತೋಳ್ಬಲವೇ ವಿಜೃಂಭಿಸುತ್ತಿದೆ. ಈ ಸಂದರ್ಭದಲ್ಲಿ ನನಗೆ ಕ್ಷೇತ್ರದ ಜನ ಸಾಮಾನ್ಯರ ಅನಿಸಿಕೆ ಸಲಹೆ ಸೂಚನೆ ಮಾರ್ಗದರ್ಶನದ ಅಗತ್ಯವಿದೆ ಎಂದಿದ್ದಾರೆ.
ಕಳೆದ 2018ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾದ ಸ್ಪರ್ಧೆ ಮಾಡಿ ಸೋತರು ಬೇಸರಗೊಳ್ಳದೇ 2018ರಿಂದ ಇದುವರೆಗೂ ಕ್ಷೇತ್ರದಲ್ಲಿ ಹಲವು ಹೋರಾಟಗಳನ್ನು ಮಾಡುತ್ತ ಬಂದಿದ್ದೇನೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಯ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.