ಮದ್ದೂರು ತಾಲೂಕು ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಸೆ.27ರಂದು ವಲಯ ಮಟ್ಟದ ಪಾರಂಪರಿಕ ವೈದ್ಯರ ಸಮಾವೇಶ ಆಯೋಜಿಸಲಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿದತ್ತವಾದ ಗಿಡಮೂಲಿಕೆಗಳ ಚೂರ್ಣ ಬಳಕೆ ಮೂಲಕ ನಮ್ಮ ಋಷಿವರ್ಯರು ಚಿಕಿತ್ಸೆ ನೀಡುತ್ತಿದ್ದ ಪಾರಂಪಾರಿಕ ವೈದ್ಯಕೀಯ ಚಿಕಿತ್ಸೆಯನ್ನು ಬಲಗೊಳಿಸಲು ಶ್ರಮಿಸುತ್ತಿರುವ ರಾಜ್ಯ ಪರಿಷತ್ ಸೆ.27ರಂದು ವಲಯ ಮಟ್ಟದ ವೈದ್ಯ ಸಮಾವೇಶವನ್ನು ಆಯೋಜಿಸಿದೆ ಎಂದರು.
ಪರಂಪರಗತವಾಗಿ ವೈದ್ಯಕೀಯ ಚಿಕಿತ್ಸಾ ಸೇವೆ ಮಾಡುತ್ತಿರುವ ಪಾರಂಪರಿಕ ವೈದ್ಯರನ್ನು ಗುರುತಿಸುವುದು ಹಾಗೂ ಸಂಘಟಿಸುವುದು ಸಮಾವೇಶದ ಉದ್ದೇಶವಾಗಿದೆ. ಮಾತ್ರವಲ್ಲದೆ ಈ ವೈದ್ಯರ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಲುವಾಗಿ 23 ವರ್ಷದಿಂದ ಪರಿಷತ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ, ಸದಸ್ಯರಾದ ಬಿ.ಮಂಜುನಾಥ್, ಶಿವಕುಮಾರ್, ತಮ್ಮಣ್ಣ ಉಪಸ್ಥಿತರಿದ್ದರು.