ಮೈಸೂರು-ಬೆಂಗಳೂರು ವಿಭಾಗೀಯ ಮಟ್ಟದ ಸ್ಥಳೀಯ ಸಂಸ್ಥೆ ಸದಸ್ಯರಿಗೆ ನ.25ರಂದು ಮಂಡ್ಯ ನಗರದ ಬ್ರಾಹ್ಮಣ ಸಭಾದ ಗಾಯತ್ರಿಭವನಲ್ಲಿ ಬಿಜೆಪಿ ವತಿಯಿಂದ ಒಂದು ದಿನದ ಪ್ರಶಿಕ್ಷಣ ವರ್ಗ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಗಣೀಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಜನಪ್ರತಿನಿಧಿಗಳಿಗೆ ಹಿಂದಿನಿಂದಲೂ ಪ್ರಶಿಕ್ಷಣ ಕೊಡುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಗಳ ಪ್ರತಿನಿಧಿಗಳಿಗೆ ಅ.28, 29ರಂದು ಹುಬ್ಬಳ್ಳಿಯಲ್ಲಿ ಹಾಗೂ 2ನೇ ಹಂತದಲ್ಲಿ ನಗರಸಭೆ ಸದಸ್ಯರಿಗೆ 4 ಭಾಗಗಳಾಗಿ ಪ್ರಶಿಕ್ಷಣವರ್ಗ ತುಮಕೂರಿನಲ್ಲಿ ನಡೆದಿದೆ. ಇದೀಗ ಮೂರನೇ ಹಂತದಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿಗೆ ಏರ್ಪಡಿಸಲಾಗಿದೆ ಎಂದು
ಮಂಡ್ಯದಲ್ಲಿ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ 12 ಜಿಲ್ಲೆಗಳ 30 ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿರುವ ಬಿಜೆಪಿಯ 129 ಸದಸ್ಯರು ಭಾಗವಹಿಸುವರು. ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5.30ರವರೆಗೆ ಪ್ರಶಿಕ್ಷಣವರ್ಗ ನಡೆಯಲಿದೆ. 8 ಗಂಟೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಸಿದ್ದರಾಜು ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 5.30ಕ್ಕೆ ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಸಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸತೀಶ್, ಶ್ರೀಧರ್, ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು, ಪ.ನಾ.ಸುರೇಶ್, ವಕ್ತಾರ ಸಿ.ಟಿ. ಮಂಜುನಾಥ್, ಮಾಧ್ಯಮ ಸಂಚಾಲಕ ನಾಗಾನಂದ್ ಇದ್ದರು.