ಭಾರತ ಸರ್ಕಾರವು 2025ರೊಳಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವ ಯೋಜನೆ ಹೊಂದಿದ್ದು, ಈ ಅಂಗವಾಗಿ ಮಂಡ್ಯ ಜಿಲ್ಲೆಯನ್ನು 2025 ರೊಳಗೆ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಆಶಾಲತಾ ಮನವಿ ಮಾಡಿದರು.
ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದ ಅಂಗವಾಗಿ ಮಂಡ್ಯದ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ ವತಿಯಿಂದ ಕ್ಷಯ ರೋಗದ ಬಗ್ಗೆ ಅರಿವು ಹಾಗೂ ತಪಾಸಣೆಯನ್ನು ಪೌರಕಾರ್ಮಿಕರಿಗೆ ನಡೆಸಲಾಯಿತು.
ಎರಡು ವಾರಕ್ಕಿಂತ ಕೆಮ್ಮು, ಕೆಮ್ಮಿನ ಜೊತೆ ಕಫ ಬೀಳುವುದು, ಕಫದಲ್ಲಿ ರಕ್ತ, ಜ್ವರ ಬಿಟ್ಟು ಬಿಟ್ಟು ಬರುವುದು, ತೂಕ ಕಡಿಮೆ ಆಗುವುದು, ಹಸಿವಾಗದೆ ಇರುವುದು ಇಂತಹ ಲಕ್ಷಣ ಗಳಿದ್ದಲ್ಲಿ ಟಿ ಬಿ ಪರೀಕ್ಷೆ ಮಾಡಿಸಿಕೊಳ್ಳಿ, ಎಲ್ಲಾ ಆರೋಗ್ಯ ಕೇಂದ್ರ ದಲ್ಲಿ ಉಚಿತ ಪರೀಕ್ಷೆಯನ್ನು ಮಾಡಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಜುಲೈ 18 ರಿಂದ ಆಗಸ್ಟ್ 15 ರವರೆಗೂ ಸಕ್ರಿಯ ಕ್ಷಯ ರೋಗ ಆಂದೋಲನ ಪತ್ತೆಯು ನಡೆಯುತ್ತಿದೆ.
ಈ ಅಂಗವಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ಲಕ್ಷಣಗಳಿರುವವರಿಂದ ಕಫವನ್ನು ಪಡೆದು ಪರೀಕ್ಷಿಸಲಾಗುತ್ತಿದೆ. ಈ ಸಂಬಂಧ ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಬೇಕೆಂದು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ, ಪೌರಕಾರ್ಮಿಕರೇ, ನಗರವನ್ನು ಹೇಗೆ ಸ್ವಚ್ಛಗೊಳಿಸುತ್ತಿರೋ, ಅದರ ಜೊತೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕು. ಕ್ಷಯ ರೋಗದ ಲಕ್ಷಣಗಳಿದ್ದಲ್ಲಿ ಕಫ ಪರೀಕ್ಷಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಮಂಡ್ಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ, ಪರಿಸರ ಅಭಿಯಂತರ ರುದ್ರೇಗೌಡ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಲುವರಾಜು,ಅಶ್ವಥ್, ನಗರ ಆರೋಗ್ಯ ಕೇಂದ್ರ ಗುತ್ತಲು ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು