ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದ ವೇಳೆ ಬಾಲಕಿ ಮೃತಪಟ್ಟು ಮೂರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರುದ್ರಾಕ್ಷಿಪುರ ಗ್ರಾಮದ ಬಳಿ ಮಂಗಳವಾರ ರಾತ್ರಿ ಜರುಗಿದೆ.
ತಾಲೂಕಿನ ಸಿಎ ಕೆರೆ ಹೋಬಳಿಯ ಅಂಬರಹಳ್ಳಿ ಗ್ರಾಮದ ನಂದೀಶ್ ಅವರ ಪುತ್ರಿ ಎ.ಎನ್. ವೀಕ್ಷಾ (5) ಮೃತಪಟ್ಟ ಬಾಲಕಿಯಾಗಿದ್ದು ಮೃತಳ ಅಜ್ಜ ರಮೇಶ್, ತಾಯಿ ಸೌಂದರ್ಯ, ಸಹೋದರ ವಿನೀಶ್ (3) ಗಾಯಗೊಂಡಿರುವ ವ್ಯಕ್ತಿಗಳಾಗಿದ್ದಾರೆ.
ಮೃತಳ ಅಜ್ಜ ರಮೇಶ್ ತನ್ನ ಪುತ್ರಿ ಸೌಂದರ್ಯ ಅವರೊಂದಿಗೆ ತನ್ನ ಇಬ್ಬರು ಮೊಮ್ಮಕ್ಕಳನ್ನು ಅಂಬರಹಳ್ಳಿ ಗ್ರಾಮದಿಂದ ಹುಣಸೆಮರದದೊಡ್ಡಿ ಗ್ರಾಮಕ್ಕೆ ತಮ್ಮ ದ್ವಿಚಕ್ರವಾಹನದಲ್ಲಿ ಕರೆತರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡ ಎ.ಎನ್. ವೀಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದು ಇತರೆ ಮೂವರನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.