ಶಿವಸೇನೆಯನ್ನು ಒಡೆದು ಇಬ್ಭಾಗ ಮಾಡಿ ಏಕ್ ನಾಥ್ ಶಿಂಧೆಯನ್ನು ಮುಖ್ಯಮಂತ್ರಿ ಮಾಡಿದ ಮೋದಿಜೀಯ ಪ್ಲಾನ್ ಮಹಾರಾಷ್ಟ್ರದ ಅದರಲ್ಲೂ ಮುಂಬೈನಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆಗಳು ಬಹಳ ನಿಚ್ಚಳವಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿ ಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ನಡೆಸುತ್ತಿದ್ದ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೋದಿ ಹಾಗೂ ಶಾ ಹೂಡಿದ ಅತ್ಯಂತ ಕೀಳು ಮಟ್ಟದ ರಾಜಕೀಯದ ಬಗ್ಗೆ ದೇಶದ ಜನರಿಗೆ ಗೊತ್ತಿದೆ.ಉದ್ಧವ್ ಠಾಕ್ರೆಯನ್ನು ಅಧಿಕಾರದಿಂದ ಕೆಳಗಿಳಿಸಲು
ಶಿವಸೇನೆಯನ್ನು ಒಡೆದು ಛಿದ್ರಗೊಳಿಸಿ ಏಕನಾಥ್ ಶಿಂಧೆಯನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ ಬೆಳವಣಿಗೆ ಹಾಗೂ ಶರದ್ ಪವಾರ್ ಅವರ ಎನ್ ಸಿ ಪಿ ಅನ್ನು ಒಡೆದು ಅವರ ಅಣ್ಣನ ಮಗ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿ ಮಾಡಿದ ಮೋದಿ ನಡೆ ಮಹಾರಾಷ್ಟ್ರದ ಜನರಿಗೆ ಸರಿ ಎನಿಸಿಲ್ಲ.
ಉದ್ಧವ್ ಠಾಕ್ರೆ ಸಾಮಾನ್ಯವಾಗಿ ದೊಡ್ಡ ದೊಡ್ಡ ಮೈದಾನಗಳಲ್ಲಿ ನಡೆಯುವ ರ್ಯಾಲಿಗಳಲ್ಲಿ ಭಾಷಣ ಮಾಡುವುದನ್ನು ಬಿಟ್ಟರೆ, ಸಣ್ಣ ಪುಟ್ಟ ರ್ಯಾಲಿಗಳಲ್ಲಿ ಭಾಗವಹಿಸಿದ ಉದಾಹರಣೆ ಇಲ್ಲ. ಆದರೆ ಇದೇ ತಿಂಗಳ 20 ರಂದು ನಡೆಯುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಮರ ಮೊಹಲ್ಲಾಗಳು ಸೇರಿದಂತೆ ಸಣ್ಣ ಪುಟ್ಟ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಠಾಕ್ರೆ ಮುಂಬೈಯಲ್ಲಿ ಎನ್ಡಿಎ ಒಕ್ಕೂಟವನ್ನು ಧೂಳೀಪಠ ಮಾಡುವುದು ಗ್ಯಾರಂಟಿ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಇದೇ ಪ್ರಥಮ ಬಾರಿಗೆ ಏಷ್ಯಾದ ಅತ್ಯಂತ ದೊಡ್ಡ ಸ್ಲಂ ಆದ ಧಾರಾವಿಯಲ್ಲಿ ಠಾಕ್ರೆ ನಿನ್ನೆ ರಾತ್ರಿ ಸ್ಲಂ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಮೋದಿಜೀ ತನ್ನ ಮಿತ್ರ ಅದಾನಿಗಾಗಿ ಮುಂಬೈನ ಉದ್ಯೋಗ ವ್ಯಾಪಾರ ಎಲ್ಲವನ್ನೂ ಕಿತ್ತು ಕೊಟ್ಟರು. ಈಗ ಆದಾನಿಗಾಗಿ ಧಾರಾವಿ ಸ್ಲಂ ಅನ್ನು ಸಹ ಮಾರಾಟಕ್ಕೆ ಇಟ್ಟಿದ್ದಾರೆ. ಮೋದಿಜೀಯ ಸ್ನೇಹಿತರಿಗೆ ಧಾರಾವಿಯ ರಿಯಲ್ ಎಸ್ಟೇಟ್ ಭೂಮಿಯ ಮೇಲೆ ಕಣ್ಣು ಬಿದ್ದಿದೆ. ಇದಕ್ಕೆ ಶಿವಸೇನೆ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.ಆ ಮೂಲಕ ಸ್ಲಂ ಜನರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.
ಉದ್ಧವ್ ಠಾಕ್ರೆ ಅವರ ಈ ನಡೆಯಿಂದ ಶೇ.40 ಕ್ಕಿಂತ ಹೆಚ್ಚು ಸ್ಲಂಗಳಲ್ಲಿ ವಾಸಿಸುವ ಸ್ಲಂ ಜನರ ಓಟುಗಳನ್ನು ಗಳಿಸುವುದು ಶತಸಿದ್ಧ ಎನ್ನುವ ಚರ್ಚೆಗೆ ಕಾರಣವಾಗಿದೆ.