ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಮಂಡ್ಯ ನಗರಸಭೆಯ ಅಧ್ಯಕ್ಷ ಎಚ್.ಎಸ್.ಮಂಜು ಎಚ್ಚರಿಕೆ ನೀಡಿದರು.
ಮಂಡ್ಯ ನಗರಸಭೆಯಲ್ಲಿ ಇಂದು ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡ ಅವರ ಜೊತೆ ರಸ್ತೆ ಡಾಂಬರೀಕರಣದ ಬಗ್ಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಂಡ್ಯ ನಗರದ ಎಲ್ಲಾ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕಾರ್ಯ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಯಾರೂ ಕೂಡ ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ಕೈ ಹಾಕಬಾರದು. ಒಂದು ವೇಳೆ ಮುಂದುವರಿಸಿದರೆ ಕ್ರಿಮಿನಲ್ ಕೇಸು ಹಾಕುವುದಾಗಿ ತಿಳಿಸಿದರು.
ಈಗಾಗಲೇ ಡಾಂಬರೀಕರಣಕ್ಕಾಗಿ 28 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಎಲ್ಲಾ ಕಾಮಗಾರಿಗಳು ಆರಂಭವಾಗಲಿದೆ. ಮಂಡ್ಯ ಜನರ ಸುಗಮ ಸಂಚಾರಕ್ಕಾಗಿ ಎರಡು ತಿಂಗಳಲ್ಲಿ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು ಎಂದರು.
ರಸ್ತೆ ಗುಂಡಿಗಳಿಗೆ ಕೇವಲ ವೆಟ್ ಮಿಕ್ಸ್ ಹಾಕಿ ರೋಲ್ ಮಾಡಿ ಹಾಗೆ ಬಿಟ್ಟರೆ, ವಾಹನಗಳು ಓಡಾಡಿ, ರಸ್ತೆಯ ಜಲ್ಲಿ ಮೇಲೇಳುತ್ತದೆ. ವೆಟ್ ಮಿಕ್ಸ್ ಹಾಕಿದ ನಂತರ ಪ್ರತಿದಿನ ನೀರು ಹಾಕಿ ಅದು ಗಟ್ಟಿಯಾಗುವಂತೆ ಮಾಡಬೇಕು. ಆದರೆ ಕೇವಲ ಪ್ರಚಾರಕ್ಕಾಗಿ ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವುದು ಸರಿಯಲ್ಲ ಎಂದು ತಿಳಿಸಿದರು.