ಪಾಂಡವಪುರ ತಾಲ್ಲೂಕಿನ ಹಿರೇಮರಳಿ ಗ್ರಾಮದ ಹೊರವಲಯದಲ್ಲಿ ಒಂದು ವಿದ್ಯುತ್ ಕಂಬದಿಂದ ಮತ್ತೊಂದು ವಿದ್ಯುತ್ ಕಂಬಕ್ಕೆ ವಿದ್ಯುತ್ ತಂತಿಯನ್ನು ಜೋಡಣೆ ಮಾಡುತ್ತಿದ್ದಾಗ ಎಲೆಕ್ಟ್ರಿಷಿಯನ್ ಕುಮಾರ್ ಎಂಬುವರು ಆಕಸ್ಮಿಕವಾಗಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ಕುಮಾರ್ ಪಾಂಡವಪುರ ತಾಲ್ಲೂಕಿನ ಗಿರಿಯಾರಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.
ವಿದ್ಯುತ್ ಗುತ್ತಿಗೆದಾರ ಕೋಡಹಳ್ಳಿ ಶಿವಕುಮಾರ್ ಬಳಿ ಕೆಲಸ ಮಾಡುತ್ತಿದ್ದ ಕುಮಾರ್ ಇಂದು ಪಾಂಡವಪುರ ತಾಲ್ಲೂಕಿನ ಹಿರೇಮರಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ನಾಲೆಯ ದಡದಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಜೋಡಣೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ.
ಪೊಲೀಸ್ ಠಾಣೆಯಲ್ಲಿ ಇನ್ನೂ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.