ವರದಿ: ಪ್ರಭು ವಿ ಎಸ್
ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆಯನ್ನು ಪಡೆಯಲು ಮೌಲ್ಯವರ್ಧನ ಉತ್ಪನ್ನಗಳ ಜೊತೆಗೆ ಗುಣಮಟ್ಟದ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯವನ್ನು ಪಡೆಯಬೇಕೆಂದು ಓಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೆರ ತಿಳಿಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾ ಪಂ ವ್ಯಾಪ್ತಿಯ ಕೆ.ಕೊಡಿಹಳ್ಳಿ ಗ್ರಾಮದಲ್ಲಿ ರಾಗಿ ಮೌಲ್ಯವರ್ಧನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ರಾಗಬಹುದು. ರಾಗಿ ಉತ್ತಮ ಪೋಷಕಾಂಶ ಜೊತೆಗೆ ಫೈಬರ್ ಆಹಾರವಾಗಿದ್ದು ಇತ್ತೀಚಿನ ದಿನಗಳಲ್ಲಿ ರಾಗಿ ಬಳಸುವವರ ಸಂಖ್ಯೆ ಸಹ ಹೆಚ್ಚಾಗಿದ್ದು ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಂಸ್ಥೆಯ ಸಂಯೋಜಕ ರಮೇಶ್ ಮಾತನಾಡಿ, ಓಡಿಪಿ ಸಂಸ್ಥೆಯು ರೈತರ ಅಭಿವೃದ್ಧಿಗಾಗಿ ಹಲವಾರು ಕೃಷಿ ತರಬೇತಿಗಳು ಸೇರಿದಂತೆ ಅಧ್ಯಯನ ಪ್ರವಾಸಗಳ ಜೊತೆಗೆ ಸಿರಿಧಾನ್ಯ ಉತ್ಪನ್ನಗಳ ತಯಾರಿಸುವ ತರಬೇತಿ ನೀಡುತ್ತಿದೆ. ಮಾದರಿ ರೈತರಿಗೆ ಸಹಾಯ ಧನ ನೀಡುವುದರ ಮುಖಾಂತರ ರೈತರ ಅಭಿವೃದ್ಧಿಗೆ ಸಂಸ್ಥೆಯು ಶ್ರಮಿಸುತ್ತಿ ಎಂದರು.ಕಾರ್ಯಕ್ರಮದ ವೇಳೆ ಸಿರಿಧಾನ್ಯ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಜೊತೆಗೆ ಆಯ್ಕೆಯಾದ ಮಾದರಿ ರೈತರಿಗೆ ಚೆಕ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ವೇಳೆ ಸಂಯೋಜಕರಾದ ಜಯರಾಮು, ಜಾನ್, ರೈತ ಸಮಿತಿಯ ಅಧ್ಯಕ್ಷ ಹನುಮೇಗೌಡ , ಕಾರ್ಯಕರ್ತೆಯರಾದ ಭಾರತೀ ಜಯಶೀಲ, ರೈತ ಮಹಿಳೆ ರತ್ನಮ್ಮ ಸೇರಿದಂತೆ ಕೆ ಕೋಡಿಹಳ್ಳಿ ಗ್ರಾಮಸ್ಥರು ಮತ್ತು ರೈತರು ಹಾಜರಿದ್ದರು.