ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಎಸಗಿರುವ ಘಟನೆಯನ್ನು ಖಂಡಿಸಿ ಮದ್ದೂರಿನ ತಮಿಳ್ ಕಾಲೋನಿಯಿಂದ ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಜು.21ರಂದು ಪ್ರತಿಭಟನಾ ಮೆರವಣಿಗೆ ನಡೆಸಿ, ಮದ್ದೂರನ ಟಿ.ಬಿ ಸರ್ಕಲ್ ನಲ್ಲಿ ಮೆಣದಬತ್ತಿ ಹಚ್ಚಿ ಪ್ರತಿಭಟಿಸಲಾಯಿತು.
ದಿನ ನಿತ್ಯಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ದೌರ್ಜನ್ಯ ಕ್ರೂರತೆ ವಿಕೃತಿಗೆ ಕೊನೆಯಿಲ್ಲದಂತಾಗಿದೆ. ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ಬೆತ್ತಲುಗೊಳಸಿ ಮೆರವಣಿಗೆ ನಡೆಸಲಾಗಿದೆ. ಇದು ಎರಡೂವರೆ ತಿಂಗಳ ಹಿಂದೆ ನಡೆದ ಘಟನೆಯಾಗಿದೆ, ಸೋಷಿಯಲ್ ಮೀಡಿಯಾದ ಮೂಲಕ ಹೊರಬಂದು ದೇಶಾದ್ಯಂತ ವ್ಯಾಪಕವಾಗಿ ಆಕ್ರೋಶ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ಒಂದು ಸಮುದಾಯ ಮತ್ತೊಂದು ಸಮೂದಾಯದ ಮೇಲೆ ಯುದ್ದ ನಡೆಸುತ್ತಾ ದಾಳಿ ಮಾಡಿ ಹಸುಳೆಗಳನ್ನು ಬಿಡದೆ ಮಾರಣ ಹೋಮ ನಡೆಸುತ್ತಿದ್ದಾಗಲೂ ಪ್ರಧಾನಿ ಬಾಯಿ ಬಿಚ್ಚದೇ, ತಮ್ಮ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದರು, ಹೆಣ್ಣು ಮಕ್ಕಳನ್ನು ಬೆತ್ತಲು ಗೊಳಿಸಿದಾಗಲಾದರೂ 56 ಇಂಚಿನ ಎದೆಯ ಪ್ರಧಾನಿಯ ಹೃದಯ ಮಿಡಿಯಬೇಕಿತ್ತು ಅದು ಆಗಲಿಲ್ಲ, ಹೆಣ್ಣು ಮಕ್ಕಳ ಬೆತ್ತಲ ಮೆರವಣಿಗೆಯಲ್ಲಿ ತಮ್ಮ ಚುನಾವಣೆಯ ಅಬ್ಬರವಿತ್ತು. ಮಣಿಪುರದಲ್ಲಿ BJP ಪಕ್ಷದ ಆಳ್ವಿಕೆಯಲ್ಲಿ ಇರುವ ಮುಖ್ಯಮಂತ್ರಿ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬದಲು, ಇಂತಹ ಪ್ರಕರಣ ನೂರಾರು ನಡೆದಿವೆ ಎಂದು ಬೇಜವಾಬ್ದಾರಿ ತನದ ಅಹಂಕಾರದ ಹೇಳಿಕೆ ನೀಡುತ್ತಿದ್ದಾರೆ ಎಂದು ಖಂಡಿಸಿದರು.
ಭೇಟಿ ಬಚಾವೋ ಭೇಟಿ ಪಡಾವೋ ಬೇಡ, ಹೆಣ್ಣು ಮಕ್ಕಳ ಮೇಲಿನ ಹಿಂಸಾಚಾರಕ್ಕೆ ಮರುಗದ, ಆಕ್ರೋಶ ವ್ಯಕ್ತ ಪಡಿಸದ 57 ಇಂಚಿನ ಎದೆಯ ಪ್ರಧಾನಿಯೂ ಬೇಡ. ಹೆಣ್ಣು ಮಕ್ಕಳಿಗೆ ಭದ್ರತೆ, ಸುರಕ್ಷತೆ ಮತ್ತು ರಕ್ಷಣೆ ಬೇಕು ಹೆಣ್ಣು ಮಕ್ಕಳನ್ನು ಪೈಶಾಚಿಕವಾಗಿ ನಡೆಸಿಕೊಂಡಿರುವ ಅಯೋಗ್ಯರಿಗೆ ಕಠಿಣ ಶಿಕ್ಷೆ ಆಗಲೇಬೇಕು, ಕಾನೂನು ವ್ಯವಸ್ಥೆಯನ್ನು ಬಿಗಿಗೊಳಿಸಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗರೀಕ ಸಮಾಜ ಇನ್ನಾದರೂ ಎಚ್ಚೆತ್ತುಕೊಂಡು ಧ್ವನಿ ಎತ್ತಬೇಕು. ಈ ದಿನ ಬರಿ ಮಣಿಪುರದ ಹೆಣ್ಣು ಮಕ್ಕಳು ಮಾತ್ರ ಬೆತ್ತಲಾಗಿಲ್ಲ, ಇಡೀ ಭಾರತ ವಿಶ್ವದ ಮುಂದೆ ಬೆತ್ತಲಾಗಿದೆ. ಹೊರ ದೇಶದಿಂದ ಬರುವ ಪ್ರವಾಸಿಗಳಿಗೂ ಮಹಿಳೆಯರಿಗೆ ಭಾರತ ಸುರಕ್ಷಿತ ಅಲ್ಲ ಎಂದು ಹೇಳುವ ಹಂತಕ್ಕೆ ನಮ್ಮ ದೇಶದ ಸ್ಥಿತಿ ಬಂದಿದೆ. ಯುವ ಜನತೆ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಭಾರತಾಂಬೆಯ ಮಾನ ಹರಾಜಾಗುತ್ತಿದ್ದರೆ, ಬರಿ ಬಾಯಲ್ಲಿ ಭಾರತ ಮಾತಾಕಿ ಜೈ ಎಂದರೆ ಸಾಲದು, ಮೇರಾ ಭಾರತ್ ಮಹಾನ್ ಎಂದು ಬೊಬ್ಬೆ ಹೊಡೆದರೆ ಸಾಲದು ಅದನ್ನು ಉಳಿಸುವ ಸಲುವಾಗಿ ಇಡೀ ನಾಗರೀಕ ಸಮಾಜ ಬಾಯಿ ತೆರೆಯಬೇಕಿದೆ, ಬಾಯಿ ಮುಚ್ಚಿ ಕುಳಿತ ಪ್ರಧಾನಿಯನ್ನು ಪ್ರಶ್ನಿಸ ಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಮಹಿಳಾ ಮುನ್ನಡೆಯ ಶಿಲ್ಪ, ಸೌಮ್ಯ, ಶೈಲಜ, ಉಮಾ, ಗಂಗಾ, ಲತಾ, ರೂಪ ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಜಗದೀಶ್ ನಗರಕೆರೆ, ಚಂದ್ರು ವೈದುನ,ದಲಿತ ಸಂಘರ್ಷ ಸಮಿತಿ ಮುಖಂಡರಾದ ರಮಾನಂದ್, ಪ್ರಗತಿಪರರ ಒಡನಾಡಿಗಳಾದ ಕಾಗೆಪುರ ಚೇತನ್ ಮತ್ತು ಅನಿಲ್ ರವರು ಭಾಗವಹಿಸಿದ್ದರು.