ಇದೇ ಸೆ.17ರಂದು ನಡೆಯಲಿರುವ ವಿಶ್ವಕರ್ಮ ಜಯಂತೋತ್ಸವದ ಅಂಗವಾಗಿ ನಾಗಮಂಗಲ ತಾಲ್ಲೂ ಕಿನಾದ್ಯಂತ ಸೋಮವಾರ ಬೈಕ್ ರ್ಯಾಲಿ ನಡೆಯಿತು.
ಎಸ್.ಎಸ್.ಕೆ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ನಂತರ ಬೈಕ್ ರ್ಯಾಲಿಗೆ ಸಬ್ ಇನ್ಸ್ ಪೆಕ್ಟರ್ ರವಿಶಂಕರ್ ಮತ್ತು ವಿಶ್ವಕರ್ಮ ಸಂಘದ ಅಧ್ಯಕ್ಷ ಕೃಷ್ಣಾಚಾರಿ ಅವರು ಚಾಲನೆ ನೀಡಿದರು.
ಕಳೆದ ಮೂರು ವರ್ಷಗಳಿಂದ ಸರಳವಾಗಿ ಆಚರಿಸಲಾಗಿದ್ದ ಜಯಂತಿಯನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಬೃಹತ್ ಜಯಂತೋತ್ಸವ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಸಮಾಜವನ್ನು ಕೂಡಿಸುವ ಸಲುವಾಗಿ ಬೈಕ್ ರ್ಯಾಲಿ ನಡೆಸಲಾಯಿತು.
ಎಲ್ಲಾ ಹೋಬಳಿಯ ಗ್ರಾಮಗಳಿಗೆ ಸಂಚರಿಸಿ, ವಿಶ್ವಕರ್ಮ ಜಯಂತಿಗೆ ಆಗಮಿಸುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಲಾಯಿತು.
ಬಿಂಡಿಗನವಿಲೆ ಹೋಬಳಿಗೆ ರ್ಯಾಲಿ ತಲುಪುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಸ್ಎಸ್ಕೆ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ನೂರಾರು ಮುಖಂಡರು ರ್ಯಾಲಿಯಲ್ಲಿ ಭಾಗವಹಿಸಿದರು.