ಪ್ರಸ್ತುತ ಸಂದರ್ಭದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಈ ದಿನ.ಕಾಮ್ ಮಾಧ್ಯಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮಂಡ್ಯನಗರದ ಸಂಜಯ ವೃತ್ತದಲ್ಲಿ ಗುರುವಾರ ಈ ದಿನ.ಕಾಮ್ ಆಪ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಹಲವು ಕಾರ್ಪೊರೇಟ್ ಕಂಪನಿಗಳು ಮಾಧ್ಯಮ ಕ್ಷೇತ್ರವನ್ನು ಪ್ರವೇಶ ಮಾಡಿವೆ, ವರದಿಗಾರರು ನಮ್ಮವರೇ ಆದರೂ, ಸಂಸ್ಥೆಯ ಮಾಲೀಕರ ಅಣತಿಯಂತೆಯೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೇ ಸೃಷ್ಟಿಯಾಗಿದೆ. ಆದರೆ ಈ ದಿನ.ಕಾಮ್ ಗೆ ನಿರ್ದಿಷ್ಟ ವ್ಯಕ್ತಿಯ ಮಾಲೀಕತ್ವ ಇಲ್ಲ, ಇಲ್ಲಿ ಜನರೇ ವರದಿಗಾರರು, ಜನರೇ ಮಾಲೀಕರಾಗಿದ್ದಾರೆ. ಇಂತಹ ಪರಿಕಲ್ಪನೆ ಮಾಧ್ಯಮವನ್ನು ನಾವು ಜನರ ಮನೆ ಮನಗಳಿಗೆ ಕೊಂಡೊಯ್ಯಬೇಕಿದೆ ಎಂದರು.
ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಜನರಿಗಾಗಿಯೇ ಮಾಧ್ಯಮ ಸಂಸ್ಥೆ ಸ್ಥಾಪನೆ ಮಾಡುವುದು ಬಹುದಿನದ ಕನಸಾಗಿತ್ತು. ಇಂದು ಅದು ನನಸಾಗಿದೆ. ಇಂದು ಕೆಲವು ಮಾಧ್ಯಮ ಸಂಸ್ಥೆಗಳು ಕೆಲವರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಅನುಮಾನ ಮೂಡುತ್ತಿದೆ. ಕುವೆಂಪು ಅವರ ಆಶಯದಂತೆ, ಅವರ ಕನಸುಗಳನ್ನು ಸಾಕಾರಗೊಳಿಸಲು ಜನರ ಮಾಧ್ಯವಾದ ಈ ದಿನ.ಕಾಮ್ ಸ್ಥಾಪನೆಯಾಗಿದೆ. ಇದರಲ್ಲಿ ಜನರೇ ಹಣ ತೊಡಗಿಸಿ, ಅವರೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಇಂತಹ ಮಾಧ್ಯಮವನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ಜಿ.ಟಿ.ವೀರಪ್ಪ, ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ರೈತ ಮುಖಂಡ ಕೃಷ್ಣ ಪ್ರಕಾಶ್, ಪರ್ತಕರ್ತರಾದ ಎನ್.ನಾಗೇಶ್, ಸಂತೋಷ್ ಜಿ., ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ, ಕಮಲ, ಶಿಲ್ಪ, ಅಂಜಲಿ, ವಿಕಸನ ಸಂಸ್ಥೆಯ ಇಂಪನ, ವಿದ್ಯಾರ್ಥಿ ಸಂಘಟನೆ ಆರ್ಮುಗಂ, ನವೀನ್ ಮತ್ತಿತರರು ಉಪಸ್ಥಿತರಿದ್ದರು.