ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೇಮಾವತಿ (ಗೊರೂರು) ಜಲಾಶಯವು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ನದಿಗೆ 25 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದ್ದು, ಹೇಮಾವತಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಯ ತಗ್ಗು ಪಾತ್ರದ ಜನರು ಎಚ್ಚರ ವಾಗಿರಬೇಕು ಎಂದು ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಆನಂದ್ ಮನವಿ ಮಾಡಿದರು.
ಗದ್ದೆ ಹೊಸೂರು, ಚಿಕ್ಕ ಮಂದಗೆರೆ, ಶ್ರವಣೂರು, ಬಂಡಿಹೊಳೆ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದ್ದು, ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರವಾಗಿರುವ ಜೊತೆಗೆ ನದಿಗೆ ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಕುಡಿಸಲು ನದಿಗೆ ಇಳಿಯಬಾರದು ಎಂದು ಎಚ್ಚರಿಸಿದ ಎಕ್ಸಿಕ್ಯೂಟಿವ್ ಎಂಜಿನಿಯರ್ ಆನಂದ್ ಗೊರೂರು ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು ನದಿಗೆ ಹರಿಯ ಬಿಡುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತ ಬಾಂಧವರು ಎಚ್ಚರವಾಗಿರಬೇಕೆಂದ ಸೂಚಿಸಿದರು.
ನದಿಯ ಪಾತ್ರದ ತಗ್ಗುಗಳಲ್ಲಿ ವಾಸವಾಗಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ನದಿಗೆ ಇಳಿಯುವುದು, ದನಕರುಗಳನ್ನು ತೊಳೆಯಲು ನದಿಗೆ ಹೋಗುವುದು ಸೇರಿದಂತೆ ನದಿಯ ಪಾತ್ರದತ್ತ ತೆರಳ ಬಾರದು ಎಂದು ತಿಳಿಸಿ, ಎಚ್ಚರಿಕೆ ಸೂಚನಾ ಫಲಕಗಳನ್ನು ಹಾಕಿಸಿದ್ದಾರೆ.
ಹೇಮಾವತಿ ನದಿ ಪಾತ್ರದ ಹೇಮಗಿರಿ ಆಣೆಕಟ್ಟೆ ಹಾಗೂ ಮಂದಗೆರೆ ಅಣೆಕಟ್ಟೆಗೆ ಸರ್ಕಲ್ ಇನ್ಸ್ಪೆಕ್ಟರ್ ರೇವತಿ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ಪಿಡಿಓ ದಯಾಶಂಕರ್, ಎಈಈ ವಿಶ್ವನಾಥ್, ಸಹಾಯಕ ಎಂಜಿನಿಯರ್ ಗಳಾದ ನಾಯಕ್, ರಾಘವೇಂದ್ರ ಹಾಗೂ ಸಹಾಯಕ ಕಿರಿಯ ಎಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲಿಸಿದರು.